Monday, June 6, 2011

ಅಪರಿಚಿತೆ....

ಈ ಘಟನೆ ನಡೆದದ್ದು ಸುಮಾರು ‍6 ವರ್ಷಗಳ ಹಿಂದೆ, ಅಂದರೆ ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ...

ಆವತ್ತು ಸಂಜೆ ಎಂದಿನಂತೆ ಕಾಲೇಜು ಬಿಟ್ಟ ನಂತರ ಬಸ್ ಸ್ಟಾಂಡಿಗೆ ಬಂದು ಬಸ್ಸಿಗೆ ಕಾಯುತ್ತಾ ನಿಂತಿದ್ದೆ. ಅಕ್ಕ ಪಕ್ಕ ಯಾರೂ ಇರಲಿಲ್ಲ, ನಾನು ಒಬ್ಬನೇ ನಿಂತಿದ್ದೆ.ಆಷ್ಟು ಹೊತ್ತಿಗೆ ಅಲ್ಲಿಗೆ ಒಬ್ಬಳು ಹುಡುಗಿ ಬಂದಳು. (ನನಗಿಂತ ಒಂದೆರಡು ವರ್ಷ ದೊಡ್ಡವಳಿರಬಹುದು), ಬಂದವಳೇ ನನ್ನನ್ನು ನೋಡಿ.... “ಹಾಯ್ ಅಂಶುಮಂತ, ಹೇಗಿದ್ದಿಯಾ? ಚೆನ್ನಾಗಿದ್ದಿಯಾ? ಅಪ್ಪ ಅಮ್ಮ ಹೇಗಿದ್ದಾರೆ? ತಂಗಿ ಯಾವ ಕ್ಲಾಸಿನಲ್ಲಿ ಓದುತ್ತಿದ್ದಾಳೆ?” ಎಂದು ಮಾತನಾಡಿಸಲು ಪ್ರಾರಂಭಿಸಿದಳು.

ನಿಜವಾಗಿಯೂ ಅವಳು ಯಾರೆಂದು ನನಗೆ ಗೊತ್ತಿರಲಿಲ್ಲ. (ಅವಳು ನನ್ನ ತಂದೆಯ ಶಿಷ್ಯೆ ಇದ್ದಿರಬಹುದು). ಮಾತನಾಡಿಸುವ ಮುಂಚೆ ತಾನು ಯಾರು ಎಂದಾದರೂ ಹೇಳಬಾರದೇ? ಇಷ್ಟು ಹೊತ್ತು ಮಾತನಾಡಿ “ನೀವು ಯಾರು?” ಎಂದು ಹೇಗೆ ಕೇಳುವುದು ಎಂಬ ಸಂಕೋಚ ಬೇರೆ.

ಇಷ್ಟು ಹೊತ್ತಿಗಾಗಲೇ ಅವಳು ಹೋಗಬೇಕಾಗಿದ್ದ ಬಸ್ಸು ಬೇರೆ ಬಂತು, “ಸರಿ, ಬಾಯ್... ಇನ್ನೊಮ್ಮೆ ಸಿಗುತ್ತೇನೆ..” ಎಂದು ಹೇಳಿ ಹೋದವಳು ಇವತ್ತಿನ ವರೆಗೂ ನನಗೆ ಅವಳ ಭೇಟಿಯಾಗಲಿಲ್ಲ.... ಆ ಅಪರಿಚಿತೆ ಯಾರಿರಬಹುದು ಎಂಬ ಪ್ರಶ್ನೆ ಇನ್ನೂ ನನ್ನ ತಲೆಯಲ್ಲಿ ಕೊರೆಯುತ್ತಿದೆ.....

Sunday, April 3, 2011

ನಿತ್ಯ ಜೀವನದಲ್ಲಿ ಅಂತರ್ಜಾಲ

ನಾನು ಇಂದಿನ ಹಲವಾರು ದಿನ ಪತ್ರಿಕೆಗಳು, ವಾರ ಪತ್ರಿಕೆಗಳಲ್ಲಿ ಗಮನಿಸಿದ ಅಂಶವೆಂದರೆ, ಅದರಲ್ಲಿ ಅಂತರ್ಜಾಲ ಕುರಿತಾದ ಯಾವುದೇ ಲೇಖನಗಳಿರಲಿ ಅದು ಸಮಾಜಕ್ಕೆ ಮಾರಕ, ಯುವಜನರು ದಾರಿತಪ್ಪುತ್ತಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಸ್ವಲ್ಪ ಯೋಚಿಸಿ ನೋಡಿ, ಅಂತರ್ಜಾಲವಿಲ್ಲದೇ ಇರುತ್ತಿದ್ದರೆನಮ್ಮ ಜೀವನ ಇಷ್ಟು ಸುಸೂತ್ರವಾಗಿ ಸಾಗುತ್ತಿತ್ತೇ? ಬೆಳಗ್ಗಿಂದ ರಾತ್ರೆಯವರೆಗೂ ನಾವು ಒಂದಲ್ಲ ಒಂದು ರೀತಿ ಅಂತರ್ಜಾಲದ ಜಾಲದಲ್ಲಿ ಬಂಧಿತರಾಗಿದ್ದೇವೆ. ಅದು ಹೇಗೆ, ಅಂತರ್ಜಾಲದಿಂದ ನಮಗಾಗುವ ಉಪಯೋಗಗಳೇನು ಅನ್ನುವುದನ್ನ ಸ್ವಲ್ಪ ನೋಡೋಣ.

ಇ-ಪೇಪರ್

ಬೆಳಗ್ಗೆ ಎದ್ದ ಕೂಡಲೇ ದಿನ ಪತ್ರಿಕೆ ಓದುವುದು ಸಾಮಾನ್ಯ ಅಭ್ಯಾಸ, ಮನೆಯಲ್ಲಿ ದಿನಾಲು ಯಾವುದಾದರು ಒಂದು ಪತ್ರಿಕೆಯನ್ನ ತರಿಸುತ್ತೇವೆ; ಆದರೆ ನಮಗೆ ಬೇರೆ ಪತ್ರಿಕೆಯಲ್ಲಿ ಏನು ವಿಶೇಷ? ವಿದೇಶದ ಪತ್ರಿಕೆಯಲ್ಲಿ ಏನು ಇದೆ? ಎಂಬ ಕುತೂಹಲ ಬಂದಾಗ ಅಂಗಡಿಗೆ ಹೋಗಿ ನಾಲ್ಕಾರು ಪತ್ರಿಕೆ ಕೊಂಡು ತಂದರೆ ಜೇಬಿಗೆ ಭಾರ, ಅದಕ್ಕೇ ಸುಲಭ ಉಪಾಯವೆಂದರೆ ಅಂತರ್ಜಾಲ ಪತ್ರಿಕೆ ಅಥವಾ ಈ ಪೇಪರ್. ನಿಮಗೆ ಯಾವ ಪತ್ರಿಕೆಯನ್ನು ಓದಬೇಕೋ ಆ ಪತ್ರಿಕೆಯ ವೆಬ್ ಸೈಟ್ ಗೆ ಹೊದರೆ ಸಾಕು ಕ್ಷಣ ಮಾತ್ರದಲ್ಲಿ ನೀವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮಗೆ ಬೇಕಾದ ಪತ್ರಿಯನ್ನು ಓದಬಹುದು. ಅಷ್ಟೇ ಅಲ್ಲ ಅದರಲ್ಲಿ ಬರೆದಿರುವ ಲೇಖನಗಳಿಗೆ ಪ್ರತಿಕ್ರಿಯೆಗಳನ್ನೂ ಕೊಡಬಹುದು. ಜೊತೆಗೆ ದೈನಂದಿನ ಸುದ್ದಿಗಳಿಗೆಂದೇ ಮೀಸಲಾಗಿರುವ ವೆಬ್ ಸೈಟ್ ಗಳಿವೆ. ಅದರಲ್ಲಿ ಸುದ್ದಿಯ ಜೊತೆಗೇ ಹವಾಮಾನ ವರದಿ, ಟಿವಿ ಕಾರ್ಯಕ್ರಮಗಳು ಇತ್ಯಾದಿ ಎಲ್ಲವನ್ನೂ ನೋಡಬಹುದು. ಅಷ್ಟೇ ಅಲ್ಲ, ಸುದ್ದಿಯಲ್ಲಿರುವ ಫೊಟೊ ಗಳ ಜೊತೆಗೆ ವಿಡಿಯೋ ಕೂಡಾ ನೋಡಬಹುದು.

ಇ-ಬ್ಯಾಂಕಿಂಗ್

ಬ್ಯಾಂಕಿಂಗ್ ವ್ಯವಹಾರ ನಮ್ಮ ದೈಂನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಇನ್ನೊಂದು ವಿಷಯ. ಆದರೆ ಕಚೇರಿ ಕೆಲಸದ ನಡುವೆ ಬ್ಯಾಂಕ್ ಗೆ ಹೋಗಿ ಉದ್ದ ಸರತಿ ಸಾಲಿನಲ್ಲಿ ನಿಂತು ವ್ಯವಹಾರ ಮುಗಿಸಿ ಬರುವುದರಲ್ಲಿ ಸಾಕು ಸಕಾಗುತ್ತದೆ, ಅಲ್ಲದೇ ಅರ್ಧ ದಿನವನ್ನು ಇದಕ್ಕೋಸ್ಕರವಾಗಿಯೇ ಮೀಸಲಾಗಿಡಬೇಕು. ಈ ಎಲ್ಲಾ ಜಂಜಾಟ ಪಾರಾಗಲು ಸುಲಭೋಪಾಯವೆಂದರೆ “ಇ-ಬ್ಯಾಂಕಿಂಗ್”. ಇಂದು ಎಲ್ಲಾ ಬ್ಯಾಂಕ್ ಗಳು ಈ ಸೌಲಭ್ಯವನ್ನು ನೀಡುತ್ತಿವೆ. ನೀವು ಬ್ಯಾಂಕ್ ಗೆ ಒಂದು ಅರ್ಜಿ ಯನ್ನು ಕೊಟ್ಟರೆ ಸಾಕು, ಅವರೇ “ಇ-ಬ್ಯಾಂಕಿಂಗ್” ಖಾತೆಯನ್ನು ಉಚಿತವಾಗಿ ಒದಗಿಸಿಕೊಡುತ್ತಾರೆ. ಇದು ಬಹಳ ಉಪಯೋಗಿ ಅಷ್ಟೇ ಅಲ್ಲ, ಬಹಳಷ್ಟು ಸಮಯವೂ ಉಳಿತಾಯವಾಗುತ್ತದೆ.

ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಜಮೆ, ಖರ್ಚನ್ನು ನೋಡುವುದರ ಜೊತೆಗೆ, ಇತರರ ಖಾತೆಗೆ ಹಣದ ವರ್ಗಾವಣೆಯನ್ನು ಕ್ಷಣಮಾತ್ರದಲ್ಲಿ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮ ಇ-ಖಾತೆ ಇದ್ದರೆ ಮನೆಯಲ್ಲಿಯೇ ಕುಳಿತು ದೂರವಾಣಿ ಬಿಲ್, ಡಿಟಿಹೆಚ್ ಬಿಲ್ ಇತ್ಯಾದಿಗಳನ್ನು ಪಾವತಿಸಬಹುದು. ನಾವು ಇಂದು ಸಾಮಾನ್ಯವಾಗಿ ಬಳಸುವ ಎಟಿಎಂ ಅನ್ನು ಬಳಸುತ್ತೇವೆ ಇದಕ್ಕೂ ಕೂಡಾ ಅಂತರ್ಜಾಲ ವ್ಯವಸ್ಥೆ ಅತ್ಯಗತ್ಯ. ಅಲ್ಲದೇ ಈ ಸೌಲಭ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ನಲ್ಲಿಯೇ ಬ್ಯಾಂಕಿಂಗ್ ಸೌಲಭ್ಯಗಳನ್ನು ಹಲವಾರು ಬ್ಯಾಂಕ್ ಗಳು ಕೊಡಲಾರಂಭಿಸಿವೆ.

ಮಾಹಿತಿ

“ಗೂಗಲ್” ಯಾರಿಗೆ ಗೊತ್ತಿಲ್ಲದ ಹೆಸರು ಹೇಳಿ. ನಿಮಗೆ ಯಾವುದೇ ರೀತಿಯ ಮಾಹಿತಿ ಬೇಕಾದರೂ ಸರಿಯೇ, ಅದು “ಗೂಗಲ್” ನಲ್ಲಿ ಲಭ್ಯ, ಇದು ಇಂಗ್ಲಿಷ್ ಮಾತ್ರ ಅಲ್ಲದೇ, ಕನ್ನಡ ಸೇರಿದಂತೆ ಜಗತ್ತಿನ ಹಲವಾರು ಭಾಷೆಗಳಲ್ಲಿ ಲಭ್ಯವಿದೆ. ನಿಮಗೆ ಯಾವ ವಿಷಯದ ಮಾಹಿತಿ ಬೇಕೆಂದು ಟೈಪಿಸಿ; ಸರ್ಚ್ ಎಂದು ಕೊಟ್ಟರಾಯಿತು, ಅದಕ್ಕೆ ಸಂಬಂಭ ಪಟ್ಟ ನೂರಾರು ವೆಬ್ ಸೈಟ್ ಗಳ ಪುಟಗಳು ತೆರೆದು ಕೊಳ್ಳುತ್ತದೆ. ಮೊಜ಼ಿಲ್ಲಾ, ರೆಡಿಫ಼್ ಸರ್ಚ್, ಇತ್ಯಾದಿ ಅಂತರ್ಜಾಲ ತಾಣಗಳೂ ಇಂಥ ಮಾಹಿತಿಯನ್ನು ಹುಡುಕಲು ನೆರವಾಗುತ್ತವೆ. ಜೊತೆಗೆ “ವಿಕಿಪೀಡಿಯಾ” ಅಂಥ ವಿಶ್ವ ಕೋಷಗಳೂ ಲಭ್ಯವಿದೆ. ಇದರಲ್ಲೂ ಎಲ್ಲಾ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ.

ಟಿಕೆಟ್ ಬುಕ್ಕಿಂಗ್

ನಿಮಗೆ ಯಾವುದೋ ಸಿನಿಮಾಗೆ ಹೋಗಬೇಕೆಂದಿಟ್ಟುಕೊಳ್ಳಿ, ಆದರೆ ಸಿನಿಮಾ ಪ್ರಾರಂಭವಾಗುವ ಸಮಯಕ್ಕೆ ಹೋದರೆ ಟಿಕೆಟ್ ಸಿಗುವುದು ಕಷ್ಟ, ಸಿಕ್ಕರೂ ಬೇಕಾದ ಸೀಟ್ ಸಿಗುತ್ತದೋ ಇಲ್ಲವೋ? ಇದಕ್ಕೆ ಸುಲಭೋಪಾಯವೆಂದರೆ ಅಂತರ್ಜಾಲದಲ್ಲಿಂದಲೇ ಟಿಕೆಟ್ ಬುಕ್ಕಿಂಗ್ ಮಾಡುವುದು. “ಬುಕ್ ಮೈ ಶೋ” ಎಂಬಂಥ ಸೈಟ್ ಗೆ ಹೋಗಿ ಅಲ್ಲಿ ಟಿಕೆಟ್ ಬುಕ್ ಮಾಡುವುದಷ್ಟೇ ಅಲ್ಲ, ಅಲ್ಲಿ ನಮಗೆ ಬೇಕಾದ ಸೀಟನ್ನು ಆರಿಸಿಕೊಳ್ಳಬಹುದು. ಅಲ್ಲದೇ ನಾಟಕ, ಹಾಗೂ ಇತರೇ ಕಾರ್ಯಕ್ರಮಗಳಿಗೂ ಕೂಡಾ ಮನೆಯಲ್ಲಿಯೇ ಕುಳಿತು ಟಿಕೆಟ್ ಖರೀದಿಸಬಹುದು.

ಅಷ್ಟೇ ಅಲ್ಲ ಬಸ್, ರೈಲು, ಹಾಗು ವಿಮಾನದ ಟಿಕೆಟ್ ಗಳನ್ನು ಅಂತರ್ಜಾಲದ ಮೂಲಕವೇ ಖರೀದಿಸುವ ಕ್ರಮ ಇಂದು ಜನಪ್ರಿಯ ಗೊಳ್ಳುತ್ತಿದೆ, ಇದು ಬಹಳ ಸುಲಭ, ಸಮಯ ಉಳಿತಾಯವಾಗುವುದಷ್ಟೇ ಅಲ್ಲ, ಇದರಲ್ಲಿ ನಿಮಗೆ ಹಲವಾರು ಬಾರಿ ಆಕರ್ಷಕ ಉಡುಗೋರೆಗಳು, ಕಡಿತಗಳೂ ಸಿಗುತ್ತವೆ. ಇದಕ್ಕೆ ತಗಲುವ ವೆಚ್ಚವನ್ನು “ಇ-ಬ್ಯಾಂಕಿಂಗ್” ಮೂಲಕ ಪಾವತಿಸಬಹುದು.

ಇ-ಮೈಲ್

ಇಂದು ನಾವು ಯಾರ ಬಳಿಯಾಗರೂ ಅವರ ಫೋನ್ ನಂಬರ್ ತೆಗೆದುಕೊಳ್ಳುವುದರ ಜೊತೆಗೆ ಅವರ “ಇ-ಮೈಲ್” ವಿಳಾಸವನ್ನೂ ತೆಗೆದುಕೊಳ್ಳಲು ಮರೆಯುವುದಿಲ್ಲ .ಅಂಚೆಯಣ್ಣನ ದಿನಗಳು ಮಾಯವಾಗುತ್ತಿರುವ ಈ ದಿನಗಳಲ್ಲಿ ಆ ಜಾಗವನ್ನು ಆಕ್ರಮಸಿಕೊಳ್ಳುತ್ತಿರುವುದೇ “ಇ-ಅಂಚೆ” ಅಥವಾ “ಇ-ಮೈಲ್”. ಇದು ಸಂಪೂರ್ಣ ಉಚಿತ ಅಷ್ಟೇ ಅಲ್ಲದೆ, ಕ್ಷಣಮಾತ್ರದಲ್ಲಿ ಜಗತ್ತಿನ ಯಾವ ಮೂಲೆಗೂ ಸಂದೇಷವನ್ನು ರವಾನಿಸಬಹುದು. ಜೊತೆಗೆ, ಫೊಟೋ, ಹಾಡು, ವಿಡಿಯೋ ವನ್ನೂ ಕೂಡಾ ಲಗತ್ತಿಸಿ ಕಳುಹಿಸಬಹುದು. ಇದರಲ್ಲಿ ಪ್ರಸಿದ್ಧವಾಗಿರುವಂಥವು ಜಿ-ಮೈಲ್, ಯಾಹೂ-ಮೈಲ್, ರೆಡಿಫ಼್-ಮೈಲ್ ಇತ್ಯಾದಿ. ಇಲ್ಲಿ ನಮ್ಮ ಇ-ಮೈಲ್ ವಿಳಾಸವನ್ನು ಸೃಷ್ಟಿಸಲು ಕೂಡಾ ಯಾವುದೇ ವೆಚ್ಚ ತಗಲುವುದಿಲ್ಲ.

ಜಿ.ಪಿ.ಎಸ್

ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಎಂಬುದು ಇವತ್ತು ಪ್ರಸಿದ್ಧ ವಾಗುತ್ತಿರುವ ವ್ಯವಸ್ಥೆ, ಪ್ರವಾಸ, ವಾಹನ ಚಲಾಯಿಸುತ್ತಿರುವಾಗ ನಾವು ಯಾವ ಜಾಗದಲ್ಲಿದ್ದೇವೆ? ಯಾವ ರಸ್ತೆಯಲ್ಲಿ ಹೋಗಬೇಕೆಂದು ನಿಖರವಾಗಿ ಮಾಹಿತಿ ಕೊಡುವ ವ್ಯವಸ್ಥೆಯೇ ಜಿ.ಪಿ.ಎಸ್. ಈ ವ್ಯವಸ್ಥೆ ಕೂಡಾ ಕಾರ್ಯನಿರ್ವಹಿಸಲು ಅಂತರ್ಜಾಲದ ವ್ಯವಸ್ಥೆ ಅತ್ಯಗತ್ಯ. ಅಲ್ಲದೇ ಅಂತರ್ಜಾಲದಲ್ಲಿ ಭೂಪಟ ಗಳನ್ನೂ ನೋಡುವ ಸೌಲಭ್ಯವಿರುವುದರಿಂದ ನಾವು ಯಾವುದೋ ಗೊತ್ತಿಲ್ಲದ ಸ್ಥಳಕ್ಕೆ ಹೋಗುವುದಾದರೆ ಅಲ್ಲಿಗೆ ಹೋಗುವ ದಾರಿಯನ್ನು ಮೊದಲೇ ಸರಿಯಾಗಿ ಗುರುತಿಸಿಟ್ಟುಕೊಳ್ಳಬಹುದು.

ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳು

ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ಹರಟೆ, ವಿಚಾರ ವಿನಿಮಯ, ಜೊತೆಗೆ ಫೊಟೋ ಇತ್ಯಾದಿಗಳನ್ನು ವಿನಿಮಯ ಮಾಡಿಕೊಳ್ಳಬಹುದಾದ ತಾಣವೇ ಸೋಷಿಯಲ್ ನೆಟ್ ವರ್ಕಿಂಗ್ ತಾಣಗಳು. ಉದಾಹರಣೆಗೆ ಒರ್ಕುಟ್, ಫೆಸ್ ಬುಕ್, ಟ್ವಿಟ್ಟರ್ ಇತ್ಯಾದಿ. ಈ ತಾಣಗಳು ಸಂಪೂರ್ಣವಾಗಿ ಉಚಿತವಾಗಿವೆ. ಇಲ್ಲಿ ನೀವು ಲಾಗ್ ಇನ್ ಮಾಡಿ ನಿಮ್ಮದೊಂದು ಪ್ರೊಪೈಲ್ ಮಾಡಿದರಾಯಿತು. ಅದೇ ತಾಣದಲ್ಲಿರುವ ನಿಮ್ಮ ಸ್ನೇಹಿತರಿರಬಹುದು, ಸಂಬಂಧಿಕರಿರಬಹುದು ಅವರ ಜೊತೆ ಸದಾ ಸಂಪರ್ಕದಲ್ಲಿರಬಹುದು. ಇಲ್ಲಿ ತಮ್ಮ ಸುಳ್ಳು ಪ್ರೊಫೈಲ್ ಗಳನ್ನು ಸೃಷ್ಟಿಸಿ ದುರುಪಯೋಗ ಮಾಡುವವರು ಖಂಡಿತಾ ಇದ್ದಾರೆ. ಆದರೆ ಇಂಥ ತಾಣಗಳಿಂದ ಯುವಜನತೆಯೇ ಹಾಳಾಗುತ್ತಿದೆ ಎನ್ನುವುದೂ ಖಂಡಿತಾ ಸರಿಯಲ್ಲ. ಯಾಕೆಂದರೆ ಇಲ್ಲಿ ಉತ್ತಮ ಸ್ನೇಹಿತರನ್ನು ಪಡೆಯುವುದಷ್ಟೇ ಅಲ್ಲ, ಉತ್ತಮ ವಿಚಾರ ವಿನಿಮಯಗಳನ್ನು ಮಾಡಿಕೊಳ್ಳಲು ಕೂಡಾ ಒಂದು ವೇದಿಕೆಯಾಗಿದೆ.

ವಾಣಿಜ್ಯ ವ್ಯವಹಾರ

ಹೌದು, ಇಂದು ವಾಣಿಜ್ಯ ಲೋಕದಲ್ಲಿ ಕೂಡಾ ಅಂತರ್ಜಾಲ ತನ್ನ ಜಾಲವನ್ನು ಹರಡಿದೆ. ನೀವು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಳ್ಳುವವರಾಗಿದ್ದರೆ; ಮುಂಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ನಂತರ ಷೇರು ಖರೀದಿ ಮಾಡಬೇಕಾಗಿತ್ತು. ಇಂದು ಹಾಗಲ್ಲ ಮನೆಯಲ್ಲಿಯೇ ಕುಳಿತು ಅಂತರ್ಜಾಲದಲ್ಲಿ ಬರುವ ವಾಣಿಜ್ಯ ಸಂಬಂಧೀ ವೆಬ್ ಸೈಟು ಗಳನ್ನು ನೋಡಿಕೊಂಡು ನಿಮ್ಮ ಶೇರು ವ್ಯವಹಾರವನ್ನು ಮಾಡಬಹುದು. ಹಾಗಾಗಿ ಇಂದಿನ ಇಡೀ ವಿಶ್ವದ ವಾಣಿಜ್ಯ ವ್ಯವಹಾರವನ್ನು ಒಂದೇ ಕಡೆ ಒಗ್ಗೂಡಿಸಿರುವುದು ಅಂತರ್ಜಾಲವೆಂದರೆ ತಪ್ಪಾಗಲಾರದು.

ಜಾಹೀರಾತು ಪ್ರಪಂಚ

ಇಂದಿನ ಜಾಹಿರಾತು ಪ್ರಪಂಚದಲ್ಲಿ ಅಂತರ್ಜಾಲದ ಕೊಡುಗೆ ಬಹಳ ದೊಡ್ಡದು. ನೀವು ಯಾವುದೇ ವೆಬ್ ಪೇಜನ್ನು ತೆರೆದು ನೋಡಿ, ಅದರಲ್ಲಿ ಒಂದಲ್ಲೊಂದು ಜಾಹೀರಾತನ್ನು ನೀವು ಕಾಣಬಹುದು. ಇದು ಬಹಳ ಕಡಿಮೆ ವೆಚ್ಚವಷ್ಟೇ ಅಲ್ಲ, ಬಹಳ ಆಕರ್ಷಕವಾಗಿ ಕಾಣುತ್ತದೆ, ಹಾಗೂ ಜಗತ್ತಿನಾದ್ಯಂದ ಜಾಹೀರಾತುಗಳನ್ನು ಪ್ರಸಾರಿಸಬಹುದು. ಇಂದು ಅಂತರ್ಜಾಲದ ಜಾಹೀರಾತು ಉದ್ಯಮ ಕೂಡಾ ಬಹಳ ವೇಗವಾಗಿ ಬೆಳೆಯುತ್ತಿದೆ. ಇದು ಇಂದು ಹಲವಾರು ಜನರಿಗೆ ಉದ್ಯೋಗವನ್ನು ಕೂಡಾ ಕಲ್ಪಿಸಿ ಕೊಟ್ಟಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರ್ಜಾಲ

SSLC ಅಥವಾ PUC ಮುಗಿದ ತಕ್ಷಣ ಇನ್ಯಾವ ಕಾಲೇಜಿಗೆ ಸೇರಬೇಕು ಎನ್ನುವ ಚಿಂತೆ ಎಲ್ಲರಿಗೂ ಇರುತ್ತದೆ. ಇದಕ್ಕೋಸ್ಕರ ಊರಿಂದೂರಿಗೆ ಕಾಲೇಜುಗಳನ್ನು ಹುಡುಕುತ್ತಾ ಹೋಗುವುದಂತೂ ಸಾಧ್ಯವಿಲ್ಲದ ಮಾತು. ಇದಕ್ಕೆ ಸುಲಭೋಪಾಯವೆಂದರೆ ಅಂತರ್ಜಾಲದ ಮೊರೆ ಹೋಗುವುದು. ನೀವು ಗೂಗಲ್ ವೆಬ್ ಸೈಟ್ ಗೆ ಹೋಗಿ ನಿಮಗೆ ಬೇಕಾದ ಕಾಲೇಜು ಅಥವಾ ಸೇರಬೇಕಾಗಿರುವ ಕೋರ್ಸಿನ ಹೆಸರನ್ನು ಕೊಟ್ಟರಾಯಿತು, ಕ್ಷಣಮಾತ್ರದಲ್ಲಿ ಎಲ್ಲಾ ಮಾಹಿತಿಗಳೂ ನಿಮ್ಮ ಮುಂದಿರುತ್ತದೆ. ಬರಿ ನಮ್ಮ ರಾಜ್ಯ, ದೇಶದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲದೇ ವಿಶ್ವದ ಯಾವುದೇ ಮೂಲೆಯ ಶಾಲಾ ಕಾಲೇಜುಗಳ ವಿವರಗಳೂ ಲಭ್ಯವಾಗುತ್ತವೆ.

ಇಷ್ಟೇ ಅಲ್ಲ. ಇಂದಿನ ದಿನಗಳಲ್ಲಿ ಕಾಲೇಜು ಪ್ರವೇಶ ಪರೀಕ್ಷೆಗಳೂ ಅಂತರ್ಜಾಲದ ಮೂಲಕವೇ ನಡೆಯುತ್ತಿವೆ. ಅಲ್ಲದೇ ಫಲಿತಾಂಶವನ್ನು ಕೂಡಾ ಮನೆಯಲ್ಲಿಯೇ ಕುಳಿತು ನೋಡಬಹುದು. ನಂತರ CET ಕೌಂಸೆಲಿಂಗ್ ನಂಥ ವ್ಯವಸ್ಥೆಯಮೂಲಕ ನಿಮಗೆ ಬೇಕಾದ ಕಾಲೇಜನ್ನು ಕೂಡಾ ಅಂತರ್ಜಾಲದ ಮುಖಾಂತರ ಆರಿಸಿಕೊಳ್ಳುವ ವ್ಯವಸ್ಥೆ ನಿಮಗೆ ಗೊತ್ತೇ ಇದೆ.

ವಿದೇಶ ಗಳಲ್ಲಂತೂ ಈ ವ್ಯವಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಮನೆಯಲ್ಲಿಯೇ ಕುಳಿತು ಕೊಂಡು ಅಂತರ್ಜಾಲದ ಮುಖಾಂತರ ಪಾಠಗಳನ್ನು ಕೇಳಬಹುದು. ಅಲ್ಲದೇ ಪರೀಕ್ಷೆಯನ್ನೂ ಕೂಡಾ ಮನೆಯಿಂದಲೇ ಬರೆದು, ನಿಮ್ಮ ಡಿಗ್ರೀ ಪ್ರಮಾಣ ಪತ್ರ ನಿಮ್ಮ ಮನೆಯಬಾಗಿಲಿಗೇ ತಲುಪುತ್ತದೆ.

ಇ- ಗ್ರಂಥಾಲಯ

ಇಂದು ಪುಸ್ತಕ ತಂದು ಓದುವ ಹವ್ಯಾಸ ಕಮ್ಮಿಯಾಗುತ್ತಿದೆ, ಗ್ರಂಥಾಲಯ ಗಳಿಗೆ ಹೋಗುವ ಅಭ್ಯಾಸವೂ ಕಮ್ಮಿಯಾಗುತ್ತಿದೆ. ಇದರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದೇ ಇ-ಗ್ರಂಥಾಲಯಗಳು. ಇದು ಇನ್ನೂ ಭಾರತದಲ್ಲಿ ಅಷ್ಟಾಗಿ ಅಭಿವೃದ್ಧಿ ಗೊಂಡಿಲ್ಲ, ಆದರೆ ಪಾಶ್ಚಿಮಾತ್ಯ ದೇಷಗಳಲ್ಲಿ ಇದು ವೇಗವಾಗಿ ಬೆಳೆಯುತ್ತಿದೆ. ಅಂತರ್ಜಾಲ ತಾಣಗಳಿಗೆ ಹೋಗಿ ನೇರವಾಗಿ ಅಥವಾ ಡವ್ನ್ ಲೋಡ್ ಮಾಡಿಕೊಂಡು ನಂತರ ಓದಬಹುದು. ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಐ ಫೋನ್” ನಂಥ ಆಧುನಿಕ ಸಲಕರಣೆಗಳು ಅಂಗೈ ಯಲ್ಲಿಯೇ ಇಡೀ ಗ್ರಂಥಾಲಯವನ್ನು ನಿಮ್ಮ ಮುಂದೆ ತೆರೆದಿಡುತ್ತದೆ.

ವೈವಾಹಿಕ ಪ್ರಪಂಚದಲ್ಲಿ ಅಂತರ್ಜಾಲ

ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸ್ಪಟ್ಟಿರುತ್ತವೆ ಎಂಬ ಮಾತು ಇದೆ. ಆದರೆ ಇದು ಇಂದು ಬದಲಾಗಿ ಮದುವೆ ಅಂತರ್ಜಾಲದಲ್ಲಿ ನಿರ್ಧರಿಸ್ಪಡುತ್ತವೆ ಎನ್ನಬಹುದು. ಹಿಂದಿನ ಕಾಲದಲ್ಲಿ ಒಂದು ಗಂಡು ಅಥವಾ ಹುಡುಗಿ ಹುಡುಕುವುದೆಂದರೆ ಎಷ್ಟು ಕಷ್ಟವಾಗಿತ್ತಲ್ಲವೇ, ದಲ್ಲಾಳಿ, ಅಥವಾ ಯಾರಾದರೂ ಸಂಬಂಧಿಕರು ಇತ್ಯಾದಿಗಳ ಮುಖಾಂತರ ಮದುವೆಗಳು ನಡೆಯುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ. ಅಂತರ್ಜಾಲ ತಾಣದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಂಡರಾಯಿತು. ಭಾವಚಿತ್ರ ದೊಂದಿಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಮನಸ್ಸಿಗೊಪ್ಪುವ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳಬಹುದು.

ಹೀಗೆ ಇಂದು ನಮ್ಮ ಜೀವನದಲ್ಲಿ ಅಂತರ್ಜಾಲ ಹೇಗೆ ಹಾಸು ಹೊಕ್ಕಾಗಿದೆಯಲ್ಲವೇ? ಹೀಗಾಗಿ ನಮ್ಮ ಇಂದಿನ ಜೀವನವನ್ನು ಸುಲಭಗೊಳಿಸುತ್ತಿರುವ ಅಂತರ್ಜಾಲ ವ್ಯವಸ್ಥೆ ಸಮಾಜಕ್ಕೆ ಮಾರಕ,ಯುವಜನತೆ ಹಾಳಾಗುತ್ತಿದೆ ಎಂದು ದೂಷಿಸಿದರೆ ಹೇಗೆ. ನಿಜ ಅಂತರ್ಜಾಲದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯನ್ನುಂಟುಮಾಡುವ ವಿಷಯಗಳೂ ಇರುತ್ತವೆ, ಇದರ ಬಗ್ಗೆ ಜಾಗೃತವಾಗಿರ ಬೇಕು. ಇದನ್ನು ಹೇಗೆ ಉಪಯೋಗಿತ್ತೇವೆ ಎಂಬುದು ನಮ್ಮ ಕೈಯಲ್ಲಿದೆ ಅಷ್ಟೆ.

Sunday, January 2, 2011

ಪ್ರಯಾಣದ ದಾರಿ

ಅದೊಂದು ದಿನ ಹೊರಟಿದ್ದೆ ದೆಹಲಿಗೆ
ಕೆಲಸದ ನಿಮಿತ್ತ
ಎರಡು ದಿನದ ಸುದೀರ್ಘ ಪ್ರಯಾಣ ಹೊರಟಿದ್ದೆ ದೆಹಲಿಗೆ
ಅಲ್ಲದೇ ಬಹಳ ಬೇಜಾರು ತರಿಸುವಂಥದ್ದು ಕೂಡಾ

ಉದ್ದದ ರೈಲು ಬಂಡಿಯದು
ಇದೇನು ಸಣ್ಣ ಪ್ರಪಂಚವೋ ಎಂಬಂತ್ತಿತ್ತದು
ತರಹ ತರಹದ ಜನ
ನಾನಾ ವಿಧದ ಬದುಕುಗಳನ್ನು ತುಂಬಿಕೊಂಡಿತ್ತದು

ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು
ಹೊರಟವರು ಹಲವರು
ಮೋಜು ಮಸ್ತಿಗಾಗಿ ಹೊರಟವರು ಕೆಲವರು
ತೀರ್ಥ ಯಾತ್ರೆಯಲ್ಲಿ ದೇವ ದರ್ಶನಕ್ಕಾಗಿ ಹೋಗುವವರು ಉಳಿದವರು

ಬಂಡಿ ಹೊರಟಿತೋ, ತೆರೆದುಕೊಂಬುದು
ಅದ್ಭುತ ಪ್ರಪಂಚವೊಂದು
ಇಲ್ಲಿ ಭಾಷೆಯ ಬಂಧವಿಲ್ಲ, ಗಡಿಗಳ ತೊಂದರೆಯಿಲ್ಲ
ಈಗ ಎಲ್ಲರೂ ಬಂಧುಗಳೇ, ಎಲ್ಲರೂ ಸ್ನೇಹಿತರೇ

ರೈಲು ಸಾಗಿದಂತೆಯೇ ಇಲ್ಲಿನ ಬದುಕೂ ಸಾಗುವುದು
ನದಿ, ಕೆರೆ, ತೊರೆಗಳನ್ನು ದಾಟುತ್ತಾ
ಊರು ಕೇರಿಗಳನ್ನು ಮೀರುತ್ತಾ
ಹೋಗುವೆವು ಮುಂದೆ, ನೆನಪುಗಳುಳಿವವು ಹಿಂದೆ

ಒಹ್, ಅದೋ ನೋಡಿ ಹೊರಗೆ
ಇತ್ತ ಕಡೆ ಊರೊಂದು ಚಕ್ಕನೆ ಹಾದು ಹೋಯಿತು
ಅತ್ತ ಕಡೆ ದೂರದಲ್ಲಿ ಹಸಿರು ಕಾಡಿನ್ನೂ ಕಾಣುತ್ತಿದೆ
ಅದೇನು ಎಂದು ಅರ್ಥ ಮಾಡಿಕೊಳ್ಳೂವುದರಲ್ಲಿ ಎಲ್ಲವೂ ಮಾಯವಾಗುತ್ತಿದೆ

ಪ್ರಯಾಣ ಮುಗಿಯುತ್ತಾ ಬಂದಿದೆ
ಇನ್ನೇನು ಗಮ್ಯ ಸ್ಥಾನ ತಲುಪುವ ಸಮಯ
ರೈಲು ಕೊನೆಯ ಸ್ಥಳ ತಲುಪಿದೆ, ಎಲ್ಲರೂ ಇಳಿದಾಗಿದೆ
ಇನ್ನು ಮುಂದೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ

ಬಹಳ ಆಶ್ಚರ್ಯ ವಲ್ಲವೇ,
ನಮ್ಮ ಇಡಿ ಬದುಕಿನ ಚಿತ್ರಣ ಕೇವಲ ಎರಡು ದಿನದ ಪ್ರಯಾಣದಲ್ಲಿ ಕಂಡಿದೆ
ನಿಜ ಜೀವನದಲ್ಲೂ ಹೀಗೆಯೆ, ಹುಟ್ಟೂತ್ತೇವೆ, ಕೆಲ ದಿನ ಇದ್ದು ಪ್ರಯಾಣ ಮುಗಿಸಿ
ಕೊನೆಯ ನಿಲ್ದಾಣದಲ್ಲಿ ಇಳಿದು ಜೀವನ ಕೊನೆಗೊಳಿಸುತ್ತೇವೆ.

Saturday, August 14, 2010

ಬೆಳಕು


ಹೊಸ ಜೀವದಲಿ ಹೊಸ ಭಾವದಲಿ

ಭರವಸೆಯ ಬೆಳಕೊಂದು, ಮೂಡಿ ಮಿಂಚಿಹುದು

ಕರುಣ ದೀಪವಿದು, ಅಶಾ ಭಾವವಿದು

ಮನದ ಮೂಲೆಯಲಿ ಹೊಸ ಆಸೆ ತಂದಿಹುದು


ಕಳೆದ ಕಹಿ ದಿನಗಳ ನೆನಪು

ಮತ್ತೆ ನೆನೆವುದೇಕಿಂದು,

ಚಿಂತಿಸಿ ದೇಹವನೆ ಚಿತೆಯಾಗಿಸಬೇಕೆ

ಮರೆತು ಬಿಡು ಅದನ


ತಂಗಾಳಿ ಬೀಸಿಹುದು, ಪರಿಮಳವ ತಂದಿಹುದು

ಹರಿವ ಝರಿತೊರೆಗಳ ಸದ್ದು, ಮನವ ತುಂಬಿಹುದು

ಒಹ್, ಶಬ್ದ ಕೋಶವೇ ಸಾಲದಾಗಿದೆ ನನಗೆ

ನನ್ನ ಮನದ ಸಂತಸವ ನಿಮಗೆ ಬಣ್ಣಿಸಲು


ಸಹಸ್ರ ಹಣತೆಯ ಬೆಳಕು ಮೂಡಿಹುದು ಮನದೊಳಗೆ

ಹೊಸ ಹುರುಪು, ಹೊಸ ಆಸೆ ತಂದಿಹುದು ಜೊತೆ ಜೊತೆಗೆ

ಭರವಸೆಯ ಭಾವದಲಿ ಬದುಕು ಆತ್ಮನೆ ನೀನು

ಬದುಕಿನ ಚಿಂತನೆಯಲಿ ದೇಹ ಮನವೆರಡು ಸಾಗಿಹುದು ಜೊತೆ ಜೊತೆಗೆ.

Wednesday, August 11, 2010

ಶಿಲ್ಪ ಕಾವ್ಯ


ಬರಿಯ ಶಿಲ್ಪವಲ್ಲವಿದು

ಬರಿಯ ಕಲ್ಲ ಹೂವಲ್ಲವಿದು

ಇದೊಂದು ಕಾವ್ಯ

ಶಿಲ್ಪಿಯ ಚಾಣದಲ್ಲರಳಿದ ಕವನ


ಎಲ್ಲಿಯೋ ಬಿದ್ದಿದ್ದ ಕಲ್ಲೊಂದು

ಗಾಳಿ, ಮಳೆಯಡಿಯಿದ್ದ ಬಂಡೆಯೊಂದು

ಸುಂದರ ಶಿಲ್ಪವಾದ ಬಗೆಯಿದು

ಭಗವಂತನ ಸ್ವರೂಪವಾದ ಕಥೆಯಿದು


ಕಾವ್ಯದ ಪದಗಳ ಸುಳಿಯಲ್ಲಿ

ಶಿಲ್ಪದ ಕೆತ್ತನೆಯ ತಿರುವಿನಲ್ಲಿ

ರವಿ ಕಾಣದ್ದು ಕವಿ ಕಂಡರೆ

ಜಗ ಕಾಣದ್ದು ಶಿಲ್ಪಿ ಕಂಡ


ಕವಿಯ ಕಾವ್ಯದ ಅಮೊಘ ಕಲ್ಪನೆ

ಶಿಲ್ಪಿಯ ಶಿಲ್ಪದ ಸುಂದರ ಕೆತ್ತನೆ

ಆನಂದ ನಾಟ್ಯವಿದು

ಶಿಲ್ಪ ಕಾವ್ಯದ ಸುಂದರ ಸಮ್ಮಿಳಿತವಿದು



Tuesday, July 6, 2010

ಬದುಕು




ತಿಳಿಯದು ನನಗೆ

ಬದುಕೆಂದರೇನೆಂದು

ಅರ್ಥವಾಗದು ನನಗೆ

ಏಕೆ ಬದುಕಬೇಕೆಂದು

ಹುಡುಕುತಾ ಹೊರಟರೆ ಇದನ್ನು

ಮತ್ತೆ ಜಟಿಲವಾಗುತ್ತಿದೆ

ಕಗ್ಗಂಟಾಗುತ್ತಿದೆ

ದಟ್ಟ ಕಾಡಿನಂತೆ, ದಿಕ್ಕಿಲ್ಲದ ಸಾಗರದಂತೆ

ಸಾಧು ಸಂತರು

ಅರ್ಥೈಸಿದರು ಅವರ ಭಾಷೆಯಲ್ಲೇ

ಅಜ್ನಾನಿ ನಾನು

ನಾನೇನು ಬಲ್ಲೆ ವೇದಾಂತದ ಭಾಷೆಯ?

ನನಗೆ ತಿಳಿದುದಿಷ್ಟೆ

ನಿನ್ನೆ ಇಂದಿಲ್ಲ, ನಾಳೆ ಗೊತ್ತಿಲ್ಲ

ನೀ ಬದುಕು, ಆದರೆ ನಿನಗಾಗಿ ಅಲ್ಲ

ಇತರ ಜೀವಗಳಿಗೆ ಮಾದರಿಯಾಗೋ ಮಲ್ಲ

Tuesday, June 8, 2010

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ...

ನಾನು ಈಗ ಬರೆಯ ಹೊರಟಿರುವುದು ಮೇಲಿನ ಶೀರ್ಷಿಕೆಯ ಪುಸ್ತಕದ ಬಗ್ಗೆಯೆ... "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" ಈ ಪುಸ್ತಕ ನಾನು ಮೆಚ್ಚಿಕೊಂಡ ಕೃತಿಗಳಲ್ಲೊಂದು. ಭಾರತದ ಅಗಾಧ ಮಹಿಮೆ, ಹಿಮಾಲಯದಲ್ಲಿ ವಾಸಿಸುವ ಅಜ್ನಾತ ಸಾಧು ಸಂತರು, ಅವರ ಸಾಧನೆ, ಜೀವನದ ಮೇಲೆ ಬೆಳಕು ಚೆಲ್ಲುವ ಈ ಪುಸ್ತಕ ನಿಜವಾಗಿಯೂ ಕುತೂಹಲಕರವಾಗಿರುವುದಷ್ಟೇ ಅಲ್ಲ, ಪ್ರಾಚೀನ ಭಾರತದ ಆಧ್ಯಾತ್ಮ ಜೀವನದ ಮಹತ್ವವನ್ನೂ ನಮಗೆ ಮಾಡಿಕೊಡುತ್ತದೆ. ನಾನು ಇಲ್ಲಿ ಈ ಪುಸ್ತಕದ ಬಗ್ಗೆ ಯಾವುದೇ ವಿಮರ್ಷೆಯಾಗಲೀ, ಟಿಪ್ಪಣಿಯಾಗಲೀ ಬರೆಯುತ್ತಿಲ್ಲ, ಕೇವಲ ನನ್ನ ಅನಿಸಿಕೆಗಳನ್ನು ಬರೆಯುವ ಪ್ರಯತ್ನ.

ಮೂಲತಃ ಇದು ಆಂಗ್ಲ ಭಾಷೆಯಲ್ಲಿ ಸ್ವಾಮಿ ರಾಮರವರು ತಮ್ಮ ಅಧ್ಯಾತ್ಮಿಕ ಅನಿಭವಗಳ "Living with the Himalayan masters" ಎಂಬ ಕೃತಿಯಾಗಿದ್ದು ಇದನ್ನು ಡಿ. ಕೆ. ಶ್ಯಾಮಸುಂದರ ರಾವ್ ಅವರು ಬಹಳ ಸರಳ ಸುಂದರ ಕನ್ನಡ ಭಾಷೆಯಲ್ಲಿ ಅನುವಾದಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು 14 ಅಧ್ಯಾಯಗಳಿದ್ದು ಅದರಲ್ಲಿ ಉಪ ಅಧ್ಯಾಯಗಳಿವೆ. ಈ ಪ್ರತಿ ಅಧ್ಯಾಯಗಳೂ ಕೂಡಾ ಸ್ವಾಮಿ ರಾಮ ಅವರ ಅಧ್ಯಾತ್ಮ ಜೀವನದ ಒಂದೊಂದು ಮಜಲಿನ ಕಥೆಯನ್ನು ವಿವರಿಸುತ್ತವೆ.

ಸ್ವಾಮಿ ರಾಮರು ಬಾಲ್ಯದಲ್ಲಿರುವಾಗ ಅವರ ಗುರುಗಳು ಅವರನ್ನು ಅಧ್ಯಾತ್ಮ ಜೀವನಕ್ಕಾಗಿ ಅವರನ್ನು ತಮ್ಮ ಹಿಮಾಲಯದ ಗಮ್ಯ ಸ್ಥಾನಕ್ಕೆ ಕರೆದುಕೊಂದು ಹೋಗುವುದರಿಂದ ಪ್ರಾರಂಭ ವಾಗುವ ಜೀವನ ಮುಂದಿನ ಪುಟಗಳಲ್ಲಿ ಹಲವಾರು ಕೌತುಕ, ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅವರ ಬಾಲ್ಯದ ಜೀವನ ಬಹಳ ಸುಂದರವಾಗಿತ್ತು ಎಂದು ರಾಮರು ಹೇಳುತ್ತಾರೆ. ಆ ಅಗಮ್ಯ ಹಿಮಾಲಯದ ಸೌಂದರ್ಯದ ವರ್ಣನೆ ಇಲ್ಲಿ ಪದಗಳಲ್ಲಿ ವಿವರಿಸುವುದಂತೂ ಅಸಾಧ್ಯ. ಆ ಮುಗಿಲೆತ್ತರದ ಶಿಖರಗಳು, ಪುಷ್ಪ ಕಣಿವೆಗಳು, ಇತ್ಯಾದಿ... ಅವರ ಗುರುಗಳು ಅವರನ್ನು ಯಾವತ್ತೂ ಬಯ್ಯಲಿಲ್ಲ, ಹೊಡೆಯಲಿಲ್ಲ, ಬಹಳ ಆತ್ಮೀಯವಾಗಿ ಪ್ರ‍ೀತಿಯಿಂದ ನೋಡಿಕೊಳ್ಳುತ್ತಿದ್ದರು. ಪ್ರಕೃತಿಯ ಜೊತೆಯ ಸಹಬಾಳ್ವೆಯ ಜೀವನದ ಪಾಠ ಇವರಿಗೆ ಆಗುತ್ತದೆ.

ಮುಂದಿನ ಅವರ ಕೌಮಾರ್ಯ ಮತ್ತು ಯವ್ವನದ ಜೀವನದಲ್ಲಿ ಆಧ್ಯಾತ್ಮ ಜೀವನದ ನಿಜವಾದ ಪಾಠಗಳು ಇವರಿಗೆ ಆಗುತ್ತದೆ. ಇಲ್ಲಿ ಇವರು ಹಲವಾರು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯ ಮನುಷ್ಯನ ಜೀವನಕ್ಕೂ ಹಿಮಾಲಯದ ಕಠಿಣ ಪರಿಸ್ಥಿತಿಯಲ್ಲಿದ್ದುಕೊಂಡು ಸಾಧನೆ ಮಾಡುವುದು ಎಷ್ಟು ಕಷ್ಟವಿದೆ ಎಂಬುದು ನಮಗೆ ಅರಿವಾಗುತ್ತದೆ. ಈ ಎಲ್ಲಾ ಅವರ ಪರಿಸ್ಥಿತಿಯನ್ನು ನಿಮಗೆ ಇಲ್ಲಿ ನಾನು ಬರೆದು ವಿವರಿಸಲು ಸಾಧ್ಯವಿಲ್ಲ ಅದನ್ನು ನೀವು ಪುಸ್ತಕ ಓದಿಯೇ ಆನಂದಿಸಬೇಕು.

ಅಲ್ಲದೇ ಈ ಪುಸ್ತಕದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳನ್ನು ವಿವರಿಸಿದ್ದಾರೆ. ನಾವು ಹಿಮಾಲಯದ ಸಾಧುಗಳ ಅದ್ಭುತ ಶಕ್ತಿಗಳ ಬಗ್ಗೆ ಕೇಳಿರುತ್ತೇವೆ. ಇದರ ಕುರಿತಾದ ಹಲವಾರು ಘಟನೆಗಳನ್ನೂ ನಾವು ಈ ಪುಸ್ತಕದಲ್ಲಿ ನೋಡಬಹುದು.

ಒಟ್ಟಿನಲ್ಲಿ ಈ ಪುಸ್ತಕ ಒಂದು ಕುತೂಹಲಗಳ ಆಗರವಾಗಿದೆ. ಅಲ್ಲದೇ ಹಿಮಾಲಯದ ಮಹಾತ್ಮರ ಆಧ್ಯಾತ್ಮ ಜೀವನದ ಒಂದು ಪಕ್ಷಿನೋಟವನ್ನು ನಮಗೆ ನೀಡುತ್ತದೆ. ಒಟ್ಟಿನಲ್ಲಿ ನೀವು ಖಂಡಿತವಾಗಿ ಓದಲೇ ಬೇಕಾದ ಪುಸ್ತಕ ಇದು.