Saturday, August 14, 2010

ಬೆಳಕು


ಹೊಸ ಜೀವದಲಿ ಹೊಸ ಭಾವದಲಿ

ಭರವಸೆಯ ಬೆಳಕೊಂದು, ಮೂಡಿ ಮಿಂಚಿಹುದು

ಕರುಣ ದೀಪವಿದು, ಅಶಾ ಭಾವವಿದು

ಮನದ ಮೂಲೆಯಲಿ ಹೊಸ ಆಸೆ ತಂದಿಹುದು


ಕಳೆದ ಕಹಿ ದಿನಗಳ ನೆನಪು

ಮತ್ತೆ ನೆನೆವುದೇಕಿಂದು,

ಚಿಂತಿಸಿ ದೇಹವನೆ ಚಿತೆಯಾಗಿಸಬೇಕೆ

ಮರೆತು ಬಿಡು ಅದನ


ತಂಗಾಳಿ ಬೀಸಿಹುದು, ಪರಿಮಳವ ತಂದಿಹುದು

ಹರಿವ ಝರಿತೊರೆಗಳ ಸದ್ದು, ಮನವ ತುಂಬಿಹುದು

ಒಹ್, ಶಬ್ದ ಕೋಶವೇ ಸಾಲದಾಗಿದೆ ನನಗೆ

ನನ್ನ ಮನದ ಸಂತಸವ ನಿಮಗೆ ಬಣ್ಣಿಸಲು


ಸಹಸ್ರ ಹಣತೆಯ ಬೆಳಕು ಮೂಡಿಹುದು ಮನದೊಳಗೆ

ಹೊಸ ಹುರುಪು, ಹೊಸ ಆಸೆ ತಂದಿಹುದು ಜೊತೆ ಜೊತೆಗೆ

ಭರವಸೆಯ ಭಾವದಲಿ ಬದುಕು ಆತ್ಮನೆ ನೀನು

ಬದುಕಿನ ಚಿಂತನೆಯಲಿ ದೇಹ ಮನವೆರಡು ಸಾಗಿಹುದು ಜೊತೆ ಜೊತೆಗೆ.

Wednesday, August 11, 2010

ಶಿಲ್ಪ ಕಾವ್ಯ


ಬರಿಯ ಶಿಲ್ಪವಲ್ಲವಿದು

ಬರಿಯ ಕಲ್ಲ ಹೂವಲ್ಲವಿದು

ಇದೊಂದು ಕಾವ್ಯ

ಶಿಲ್ಪಿಯ ಚಾಣದಲ್ಲರಳಿದ ಕವನ


ಎಲ್ಲಿಯೋ ಬಿದ್ದಿದ್ದ ಕಲ್ಲೊಂದು

ಗಾಳಿ, ಮಳೆಯಡಿಯಿದ್ದ ಬಂಡೆಯೊಂದು

ಸುಂದರ ಶಿಲ್ಪವಾದ ಬಗೆಯಿದು

ಭಗವಂತನ ಸ್ವರೂಪವಾದ ಕಥೆಯಿದು


ಕಾವ್ಯದ ಪದಗಳ ಸುಳಿಯಲ್ಲಿ

ಶಿಲ್ಪದ ಕೆತ್ತನೆಯ ತಿರುವಿನಲ್ಲಿ

ರವಿ ಕಾಣದ್ದು ಕವಿ ಕಂಡರೆ

ಜಗ ಕಾಣದ್ದು ಶಿಲ್ಪಿ ಕಂಡ


ಕವಿಯ ಕಾವ್ಯದ ಅಮೊಘ ಕಲ್ಪನೆ

ಶಿಲ್ಪಿಯ ಶಿಲ್ಪದ ಸುಂದರ ಕೆತ್ತನೆ

ಆನಂದ ನಾಟ್ಯವಿದು

ಶಿಲ್ಪ ಕಾವ್ಯದ ಸುಂದರ ಸಮ್ಮಿಳಿತವಿದು



Tuesday, July 6, 2010

ಬದುಕು




ತಿಳಿಯದು ನನಗೆ

ಬದುಕೆಂದರೇನೆಂದು

ಅರ್ಥವಾಗದು ನನಗೆ

ಏಕೆ ಬದುಕಬೇಕೆಂದು

ಹುಡುಕುತಾ ಹೊರಟರೆ ಇದನ್ನು

ಮತ್ತೆ ಜಟಿಲವಾಗುತ್ತಿದೆ

ಕಗ್ಗಂಟಾಗುತ್ತಿದೆ

ದಟ್ಟ ಕಾಡಿನಂತೆ, ದಿಕ್ಕಿಲ್ಲದ ಸಾಗರದಂತೆ

ಸಾಧು ಸಂತರು

ಅರ್ಥೈಸಿದರು ಅವರ ಭಾಷೆಯಲ್ಲೇ

ಅಜ್ನಾನಿ ನಾನು

ನಾನೇನು ಬಲ್ಲೆ ವೇದಾಂತದ ಭಾಷೆಯ?

ನನಗೆ ತಿಳಿದುದಿಷ್ಟೆ

ನಿನ್ನೆ ಇಂದಿಲ್ಲ, ನಾಳೆ ಗೊತ್ತಿಲ್ಲ

ನೀ ಬದುಕು, ಆದರೆ ನಿನಗಾಗಿ ಅಲ್ಲ

ಇತರ ಜೀವಗಳಿಗೆ ಮಾದರಿಯಾಗೋ ಮಲ್ಲ

Tuesday, June 8, 2010

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ...

ನಾನು ಈಗ ಬರೆಯ ಹೊರಟಿರುವುದು ಮೇಲಿನ ಶೀರ್ಷಿಕೆಯ ಪುಸ್ತಕದ ಬಗ್ಗೆಯೆ... "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" ಈ ಪುಸ್ತಕ ನಾನು ಮೆಚ್ಚಿಕೊಂಡ ಕೃತಿಗಳಲ್ಲೊಂದು. ಭಾರತದ ಅಗಾಧ ಮಹಿಮೆ, ಹಿಮಾಲಯದಲ್ಲಿ ವಾಸಿಸುವ ಅಜ್ನಾತ ಸಾಧು ಸಂತರು, ಅವರ ಸಾಧನೆ, ಜೀವನದ ಮೇಲೆ ಬೆಳಕು ಚೆಲ್ಲುವ ಈ ಪುಸ್ತಕ ನಿಜವಾಗಿಯೂ ಕುತೂಹಲಕರವಾಗಿರುವುದಷ್ಟೇ ಅಲ್ಲ, ಪ್ರಾಚೀನ ಭಾರತದ ಆಧ್ಯಾತ್ಮ ಜೀವನದ ಮಹತ್ವವನ್ನೂ ನಮಗೆ ಮಾಡಿಕೊಡುತ್ತದೆ. ನಾನು ಇಲ್ಲಿ ಈ ಪುಸ್ತಕದ ಬಗ್ಗೆ ಯಾವುದೇ ವಿಮರ್ಷೆಯಾಗಲೀ, ಟಿಪ್ಪಣಿಯಾಗಲೀ ಬರೆಯುತ್ತಿಲ್ಲ, ಕೇವಲ ನನ್ನ ಅನಿಸಿಕೆಗಳನ್ನು ಬರೆಯುವ ಪ್ರಯತ್ನ.

ಮೂಲತಃ ಇದು ಆಂಗ್ಲ ಭಾಷೆಯಲ್ಲಿ ಸ್ವಾಮಿ ರಾಮರವರು ತಮ್ಮ ಅಧ್ಯಾತ್ಮಿಕ ಅನಿಭವಗಳ "Living with the Himalayan masters" ಎಂಬ ಕೃತಿಯಾಗಿದ್ದು ಇದನ್ನು ಡಿ. ಕೆ. ಶ್ಯಾಮಸುಂದರ ರಾವ್ ಅವರು ಬಹಳ ಸರಳ ಸುಂದರ ಕನ್ನಡ ಭಾಷೆಯಲ್ಲಿ ಅನುವಾದಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು 14 ಅಧ್ಯಾಯಗಳಿದ್ದು ಅದರಲ್ಲಿ ಉಪ ಅಧ್ಯಾಯಗಳಿವೆ. ಈ ಪ್ರತಿ ಅಧ್ಯಾಯಗಳೂ ಕೂಡಾ ಸ್ವಾಮಿ ರಾಮ ಅವರ ಅಧ್ಯಾತ್ಮ ಜೀವನದ ಒಂದೊಂದು ಮಜಲಿನ ಕಥೆಯನ್ನು ವಿವರಿಸುತ್ತವೆ.

ಸ್ವಾಮಿ ರಾಮರು ಬಾಲ್ಯದಲ್ಲಿರುವಾಗ ಅವರ ಗುರುಗಳು ಅವರನ್ನು ಅಧ್ಯಾತ್ಮ ಜೀವನಕ್ಕಾಗಿ ಅವರನ್ನು ತಮ್ಮ ಹಿಮಾಲಯದ ಗಮ್ಯ ಸ್ಥಾನಕ್ಕೆ ಕರೆದುಕೊಂದು ಹೋಗುವುದರಿಂದ ಪ್ರಾರಂಭ ವಾಗುವ ಜೀವನ ಮುಂದಿನ ಪುಟಗಳಲ್ಲಿ ಹಲವಾರು ಕೌತುಕ, ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅವರ ಬಾಲ್ಯದ ಜೀವನ ಬಹಳ ಸುಂದರವಾಗಿತ್ತು ಎಂದು ರಾಮರು ಹೇಳುತ್ತಾರೆ. ಆ ಅಗಮ್ಯ ಹಿಮಾಲಯದ ಸೌಂದರ್ಯದ ವರ್ಣನೆ ಇಲ್ಲಿ ಪದಗಳಲ್ಲಿ ವಿವರಿಸುವುದಂತೂ ಅಸಾಧ್ಯ. ಆ ಮುಗಿಲೆತ್ತರದ ಶಿಖರಗಳು, ಪುಷ್ಪ ಕಣಿವೆಗಳು, ಇತ್ಯಾದಿ... ಅವರ ಗುರುಗಳು ಅವರನ್ನು ಯಾವತ್ತೂ ಬಯ್ಯಲಿಲ್ಲ, ಹೊಡೆಯಲಿಲ್ಲ, ಬಹಳ ಆತ್ಮೀಯವಾಗಿ ಪ್ರ‍ೀತಿಯಿಂದ ನೋಡಿಕೊಳ್ಳುತ್ತಿದ್ದರು. ಪ್ರಕೃತಿಯ ಜೊತೆಯ ಸಹಬಾಳ್ವೆಯ ಜೀವನದ ಪಾಠ ಇವರಿಗೆ ಆಗುತ್ತದೆ.

ಮುಂದಿನ ಅವರ ಕೌಮಾರ್ಯ ಮತ್ತು ಯವ್ವನದ ಜೀವನದಲ್ಲಿ ಆಧ್ಯಾತ್ಮ ಜೀವನದ ನಿಜವಾದ ಪಾಠಗಳು ಇವರಿಗೆ ಆಗುತ್ತದೆ. ಇಲ್ಲಿ ಇವರು ಹಲವಾರು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯ ಮನುಷ್ಯನ ಜೀವನಕ್ಕೂ ಹಿಮಾಲಯದ ಕಠಿಣ ಪರಿಸ್ಥಿತಿಯಲ್ಲಿದ್ದುಕೊಂಡು ಸಾಧನೆ ಮಾಡುವುದು ಎಷ್ಟು ಕಷ್ಟವಿದೆ ಎಂಬುದು ನಮಗೆ ಅರಿವಾಗುತ್ತದೆ. ಈ ಎಲ್ಲಾ ಅವರ ಪರಿಸ್ಥಿತಿಯನ್ನು ನಿಮಗೆ ಇಲ್ಲಿ ನಾನು ಬರೆದು ವಿವರಿಸಲು ಸಾಧ್ಯವಿಲ್ಲ ಅದನ್ನು ನೀವು ಪುಸ್ತಕ ಓದಿಯೇ ಆನಂದಿಸಬೇಕು.

ಅಲ್ಲದೇ ಈ ಪುಸ್ತಕದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳನ್ನು ವಿವರಿಸಿದ್ದಾರೆ. ನಾವು ಹಿಮಾಲಯದ ಸಾಧುಗಳ ಅದ್ಭುತ ಶಕ್ತಿಗಳ ಬಗ್ಗೆ ಕೇಳಿರುತ್ತೇವೆ. ಇದರ ಕುರಿತಾದ ಹಲವಾರು ಘಟನೆಗಳನ್ನೂ ನಾವು ಈ ಪುಸ್ತಕದಲ್ಲಿ ನೋಡಬಹುದು.

ಒಟ್ಟಿನಲ್ಲಿ ಈ ಪುಸ್ತಕ ಒಂದು ಕುತೂಹಲಗಳ ಆಗರವಾಗಿದೆ. ಅಲ್ಲದೇ ಹಿಮಾಲಯದ ಮಹಾತ್ಮರ ಆಧ್ಯಾತ್ಮ ಜೀವನದ ಒಂದು ಪಕ್ಷಿನೋಟವನ್ನು ನಮಗೆ ನೀಡುತ್ತದೆ. ಒಟ್ಟಿನಲ್ಲಿ ನೀವು ಖಂಡಿತವಾಗಿ ಓದಲೇ ಬೇಕಾದ ಪುಸ್ತಕ ಇದು.

Tuesday, May 4, 2010

ಶಾಂತಿ...

ತಿಳಿದಿಲ್ಲ ನನಗಿಂದು
ಮನಸ್ಸು ಚಡಪಡಿಸಿಹುದು
ತಿಳಿ ನೀರಿಗೆ ಕಲ್ಲೆಸೆದಂತೆ
ಅಬ್ಬರದ ಅಲೆಗಳು ಉಕ್ಕೇರಿದಂತೆ

ಹಳೆ ದಿನಗಳು ಮತ್ತೆ ನೆನಪಾಗುವುದು
ಕತ್ತಲೆಯ ಕೋಣೆಯಲಿ ಕೂಡಿಹಾಕಿದಂತೆ
ಕಾರಣವು ತಿಳಿದಿಲ್ಲ, ಹಾದಿ ತೋಚುತ್ತಿಲ್ಲ
ಕಾರ್ಮೋಡ ಆವರಿಸಿಹುದು ಎಲ್ಲೆಲ್ಲೂ ಬೆಳಕಿಲ್ಲದಂತೆ

ಹೊರಗೆ ತಂಗಾಳಿ ಬೀಸುತ್ತಿತ್ತು
ಆದರೆ ಮನದೊಳಗೆ ಸಿಡಿಲು ಗುಡುಗಿನಬ್ಬರ
ಗಜವೊಂದು ಚೆಂದೋಟವ ಹಾಳ್ಕೆಡವಿಂತೆ
ದಿಕ್ಕು ತೋಚದ ಮೃಗವು ಕಂಗೆಟ್ಟು ಕೂಗಿದಂತೆ

ಮನವು ಬಯಸಿದೆ ಆತ್ಮ ಶಾಂತಿಯನಿಂದು
ನಿತ್ಯ ನೂತನ ಸತ್ಯ ಎಲ್ಲಿಹುದೆಂದು
ಬೋಧೀ ವೃಕ್ಷದ ಕೆಳಗೆ ಸಿಗುವುದೋ, ಅಲ್ಲ
ಹಿಮಾಲಯದ ತಪ್ಪಲಿನಲ್ಲಿ ದೊರಕುವುದೋ ತಿಳಿದಿಲ್ಲ

ಆಗೊಂದು ತರಂಗವು ನನ್ನ ಮನಸ್ಸನ್ನು ತಟ್ಟಿತು
ಓಂಕಾರ ನಾದದ ನಿನಾದ ಆತ್ಮವನ್ನು ಮುಟ್ಟಿತು
ಮನಸ್ಸು ತಿಳಿಯಾಯಿತಾಗ, ಶುದ್ಧ ಸ್ಫಟಿಕದಂತೆ
ಆತ್ಮ ಶಾಂತಿಯು ದೊರಕಿತು ಬುದ್ಧ ವಿವೇಕರಂತೆ

Friday, April 30, 2010

ಯೋಧನಿಗೆ ನಮನ

ಹೆಜ್ಜೆ ಹೆಜ್ಜೆಯ ಹಾಕಿ ಮುಂದಕೆ

ದೂರ ದೂರಕೆ, ದೇಶದಂಚಿಗೆ

ಸಾಗುತಿರುವ ಓ ವೀರನೆ

ನಿನಗೆ ನನ್ನಯ ಕೋಟಿ ನಮನ

ಹಿಮದ ಬೆಟ್ಟದ ಚಳಿಯ ನಡುವೆ

ಬಿಸಿಲ ಬೇಗೆಯ ಮರಳುಗಾಡ ನಡುವೆ

ದೇಶ ಕಾಯುವ ವೀರ ಯೋಧನೆ

ನಿನಗೆ ನನ್ನಯ ಕೋಟಿ ನಮನ

ನೀಲ ಶರಧಿಯ ದೂರದಂಚಲಿ

ಉಕ್ಕಿ ಬರುವ ಅಲೆಗೆ ಜಗ್ಗದೆ

ಬೀಸು ಗಾಳಿಗೆ ಕುಗ್ಗದ ಯೋಧಗೆ

ನಿನಗೆ ನನ್ನಯ ಕೋಟಿ ನಮನ

ಆಗಸದಲಿ ಜೀಕಿ ಹಾರುತ

ಶತ್ರು ಪಡೆಗಳ ತರಿದು ಹಾಕುತ

ವೈರಿ ಪಡೆಗಳ ಮೆಟ್ಟಿ ನಿಂತ ವೀರನೆ

ನಿನಗೆ ನನ್ನಯ ಕೋಟಿ ನಮನ

Tuesday, April 20, 2010

ಮಳೆ

ಆ ಸಂಜೆ ನನಗಿನ್ನೂ ನೆನಪಿದೆ
ಮನೆಯಂಗಳದಿ ಕೂತಿದ್ದೆ ನಾ
ಮೌನವೇ ಹೆಪ್ಪುಗಟ್ಟಿದಂತೆ
ಜಗತ್ತೇ ಸ್ತಬ್ಧವಾದಂತಿತ್ತು

ಒಣಗಿ ಹೋದ ಗಿಡ ಮರಗಳು
ಬಿರುಕು ಬಿಟ್ಟ ಭೂಮಿ
ಬಾಯಾರಿ ಕಂಗೆಟ್ಟ ಮೃಗ ಪಕ್ಷಿಗಳು
ಒಂದು ಹನಿ ನೀರಿಗಾಗಿ ಹಾತೊರೆಯುತ್ತಿತ್ತು

ಅದೆಲ್ಲೋ ದೂರದಲ್ಲಿ ಕರಿ ಮೋಡದ ಛಾಯೆ
ಗುಡುಗು ಸಿಡಿಲಿನ ಸದ್ದು
ತಂಗಾಳಿ ಬೀಸಿ, ಪರಿಮಳವ ಸೂಸಿ
ಕಗ್ಗತ್ತಲು ಸುತ್ತಲೂ ಆವರಿಸುತ್ತಿತ್ತು

ಮೊದಲ ಮಳೆಯ ಹನಿ ಟಪ್ಪನೆ ಬಿತ್ತಾಗ
ಅದರ ಹಿಂದೆ ಮತ್ತೊಂದು ಮಗದೊಂದು
ವರ್ಷದ ಮೊದಲ ಮಳೆ ಸುರಿಯಲಾರಂಬಿಸಿತ್ತು
ಮಣ್ಣಿನ ಘಮ್ಮನೆಯ ಪರಿಮಳ ಸುತ್ತಲೂ ಹರಡಿತ್ತು.

Thursday, March 4, 2010

ಬೇಲಿ

ಭಾರತ ಮತ್ತು ಪಾಕಿಸ್ತಾನದ ಮಧ್ಯದಲ್ಲಿರುವ ಬೇಲಿ. ಎಡಗಡೆ ಪಾಕಿಸ್ತಾನ, ಬಲಗಡೆ ಭಾರತ


ಬೇಲಿ ಹಾಕಿರುವೆವು ನಾವು
ಒಂದೇ ನೆಲದ ನಡುವೆ
ಆ ಕಡೆ ನಿನಗೆ, ಈ ಕಡೆ ನನಗೆ
ದಟ್ಟ ಕಾವಲಿನ ನಡುವೆ

ಮರೆತು ಹೋಗಿರುವೆವು ನಾವು
ಒಂದೇ ತಾಯಿಯ ಮಕ್ಕಳೆಂದು
ಒಂದೇ ಮನೆಯ ಒಡೆದಿರುವೆವು
ಬೇಲಿ ಹಾಕಿರುವೆವು ನಾವು

ದ್ವೇಷ ಭಾವಗಳ ಜೊತೆಗೆ
ರಕ್ತ ಪಾತದ ನಡುವೆ
ಮೂಕ ಸಾಕ್ಷಿಯಾಗಿ
ನಿಂತಿಹುದು ಈ ಮುಳ್ಳಿನ ಬೇಲಿ

ಅಣ್ಣ ತಮ್ಮಂದಿರನ್ನು,
ಅಕ್ಕ ತಂಗಿಯರನ್ನು
ಬೇರ್ಪಡಿಸಿಹುದು
ಈ ಕಬ್ಬಿಣದ ತಂತಿಯ ಬೇಲಿ

ನಾವೇಕೆ ಹೀಗೆ?
ಎಂದೆಂದಿಗೂ ಹೀಗೇ ಬಾಳಬೇಕೆ?
ಅಸೂಯೆಯ ನೆರಳಿನಲ್ಲಿ
ಧರ್ಮ ಜಾತಿಯ ಒಡಕಿನಲ್ಲಿ

ಇಬ್ಬರ ರಕ್ತ ಕೆಂಪು ಅಲ್ಲವೇ?
ಇಬ್ಬರೂ ನಿಂತಿರುವುದೂ
ಒಂದೇ ನೆಲದ ಮೇಲಲ್ಲವೇ?
ಆದರೂ ಮಧ್ಯದಲ್ಲಿದೆ ಚುಚ್ಚುವ ಬೇಲಿ

ಮರೆಯೋಣ ಈ ದ್ವೇಷವ
ಹಂಚೋಣ ಸಹೋದರ ಭಾವವ
ಬೇಕಿಲ್ಲ ನಮಗೆ ಈ ರಕ್ತಪಾತ
ಒಂದಾಗಿ ಬಾಳೋಣ, ಚಿರಕಾಲ ಮೆರೆಯೋಣ.






Wednesday, March 3, 2010

ಮಜ್ಜಿಗೆ....

ಬಹಳ ದಿನಗಳ ನಂತರ ಬ್ಲಾಗ್ ಕಡೆ ತಲೆ ಹಾಕುತ್ತಿದ್ದೇನೆ..

ಈ ಘಟನೆ ನಡೆದದ್ದು ನಾನು ಮಣಿಪಾಲದಲ್ಲಿ ಡಿಪ್ಲೊಮಾ ಮಾಡುತ್ತಿದ್ದಾಗ. ಆಗ ನಾನು ಅಲ್ಲಿ ಪೇಯಿಂಗ್ ಗೆಸ್ಟ್ ಆಗಿ ಒಬ್ಬರ ಮನೆಯಲ್ಲಿದ್ದೆ. ಅಲ್ಲಿ ಭಾನುವಾರ ರಾತ್ರೆ ಊಟ ಇರುತ್ತಿರಲಿಲ್ಲ ಹಾಗಾಗಿ ನಾವು ಅಂದು ಹೊರಗೆ ಹೊಟೇಲಿಗೆ ತಿನ್ನಲು ಹೋಗುತ್ತಿದ್ದೆವು. ಹೀಗೆ ಒಂದು ಭಾನುವಾರ ಸಂಜೆ ಊಟಕ್ಕೆ ಹೊರಗೆ ಹೋಗಿದ್ದೆವು (ನನ್ನ ಜೊತೆ ಇನ್ನೂ 2-3 ಜನ ಗೆಳೆಯರಿದ್ದರು) ಹೋಟೆಲಿಗೆ ಹೋಗಿ ಊಟ ಮಾಡಿದ್ದಾಯಿತು ಕೊನೆಗೆ ಎಲ್ಲರೂ ಒಂದೊಂದು ಜ್ಯೂಸ್ ಹೇಳಿದ್ದಾಯಿತು.... ನಮ್ಮಲ್ಲೊಬ್ಬ ಮೆನು ನೋಡಿ "ನನಗೆ butter milk ಬೇಕು" ಎಂದ. ಸರಿ ಎಲ್ಲರಿಗೂ ಜ್ಯೂಸ್ ಬಂತು ಅವನಿಗೆ butter milk ಬಂತು. ಅವನು ಒಂದು ಗುಟುಕು ಕುಡಿದ ಕೂಡಲೇ " ಥೋ... ಇದು ಮಜ್ಜಿಗೆ ಮರಾಯಾ......!!!!!" ಎಂದ... ನಮಗೆಲ್ಲಾ ತಡೆಯಲಾಗದ ನಗು. ಅವನಿಗೆ butter milk ಅಂದರೆ ಮಜ್ಜಿಗೆ ಎನ್ನುವುದೇ ಗೊತ್ತಿರಲಿಲ್ಲ.. ಕೊನೆಯವರೆಗೂ ಅಂದರೆ ನಾನು ಆ pg ಬಿಡುವ ತನಕವೂ ಕೂಡಾ ಅವನಿಗೆ Butter milk ಎಂದು ಕರೆದು ತಮಾಷೆ ಮಾಡುತ್ತಿದ್ದೆವು.

Friday, February 5, 2010

ನೀರ ಹನಿಯ ಸ್ವಗತ....

ಅಕಾಶದ ಮೋಡಗಳ ಮಧ್ಯದಲ್ಲಿ
ತೇಲಾಡುತ್ತಿದ್ದೆ ನಾ
ನನಗಿಷ್ಟ ಬಂದಂತೆ
ಗೊತ್ತು ಗುರಿಯಿರಲಿಲ್ಲ ನನಗೆ

ರೂಪವೂ ಇಲ್ಲದ ನಾನು
ನನ್ನ ಅಸ್ತಿತ್ವವನ್ನು ಹುಡುಕುತಿದ್ದೆ
ಗಾಳಿ ಬೀಸಿದ ಕಡೆಗೆ ಹೋಗುತ್ತಿದ್ದೆ ನಾ
ಒಂದು ಅಂತಿಮ ಗುರಿಯನ್ನು ಹುಡುಕುತ್ತಿದ್ದೆ

ಅದೊಂದು ದಿನ ನನಗಿನ್ನೂ ನೆನಪಿದೆ
ಗಾಳಿ ಜೋರಾಗಿ ಬೀಸುತ್ತಿತ್ತು
ನಾನೂ ಅತ್ತಲಿಂದಿತ್ತ ಜೋಲಾಡುತ್ತಿದ್ದೆ
ಒಮ್ಮೆಗೇ ಯಾವುದೋ ಪರ್ವತಕ್ಕೆ ಬಡಿದಂತಾಯಿತು

ಹೌದು ನನ್ನ ಪ್ರಯಾಣ ಪ್ರಾರಂಭವಾಗಿತ್ತು
ವರ್ಷ ಧಾರೆಯಾಗುತ್ತಿತ್ತು
ನಾನೂ ಕೂಡಾ ಮಳೆಯಲ್ಲಿ ಸೇರಿಕೊಂಡೆ
ನನ್ನ ಅಂತಿಮ ಗುರಿಯ ಕಡೆಗೆ

ಭೂಮಿಯ ಸ್ಪರ್ಶಕ್ಕೆ ಹಾತೊರೆಯುತ್ತಿದ್ದೆ
ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿತು
ನನಗೊಂದು ರೂಪವೂ ಸಿಕ್ಕಿತ್ತು
ಒಂದು ನೀರ ಹನಿಯಾಗಿದ್ದೆ

ಒಂದು ನದಿಯಲ್ಲಿ ಬಂದು ಬಿದ್ದಿದೆ
ನನ್ನ ಸುದೀರ್ಘ ಪ್ರಯಾಣಕ್ಕೆ
ನದಿಯ ನೀರಿನಲ್ಲಿ ಒಂದಾಗಿ
ಮುಂದೆ ಹೊರಟೆ, ನೀರ ಅಲೆಯ ಜೊತೆಗೆ

ಕಲ್ಲು ಬಂಡೆಗಳ ಮದ್ಯೆ ನುಗ್ಗುತ್ತಾ
ಜಲಪಾತಗಳಲ್ಲಿ ಬೀಳುತ್ತಾ
ದಟ್ಟ ಕಾನನದ ನಡುವೆ, ಬಟ್ಟ ಬಯಲಿನ ನಡುವೆ
ನನ್ನ ಪ್ರಯಾಣ ಸಾಗಿತ್ತು

ನನ್ನ ಅಸ್ತಿತ್ವದ ಅರಿವು ನನಗಾಗತೊಡಗಿತ್ತು
ಸಕಲ ಜೀವ ಜಾಲಕ್ಕೂ,
ಜೀವ ಜಲ ನಾನಾಗಿದ್ದೆ
ಇದು ಅಹಂಕಾರವಲ್ಲ, ನನ್ನ ಕರ್ತವ್ಯವೆಂದುಕೊಂಡೆ

ಮುಂದೆ ಸಾಗುತ್ತಾ ಹೋದೆ
ಆಗ ಕಂಡೆ ನಾ, ನದಿಯ ದಂಡೆಯಲ್ಲೊಂದು
ನಾಗರೀಕತೆ ಬೆಳೆಯುತ್ತಿತ್ತು
ಮಾನವ ಸಂಘ ಜೀವನಕ್ಕೆ ಅಣಿಯಾಗುತ್ತಿದ್ದ

ಹೀಗೆ ನಾ ಹೋದ ದಾರಿಯಲ್ಲೆಲ್ಲಾ
ಒಂದೊಂದು ದೃಷ್ಯವ ಕಂಡೆ
ಹಲವಾರು ಕೌತುಕಗಳನ್ನು ನೋಡಿದೆ
ನನ್ನ ಪ್ರಯಾಣ ಮುಗಿಯುವ ಹಂತಕ್ಕೆ ಬಂದಿತ್ತು

ನದಿಯು ವಿಶಾಲ ರೂಪವನ್ನು ಪಡೆದಿತ್ತು
ನನ್ನಂತೆಯೇ ಕೋಟ್ಯಾಂತರ
ಹನಿಗಳು ನದಿಯನ್ನು ಸೇರಿ ಕೊಂಡಿದ್ದವು
ನನ್ನ ಮುಂದೆ ವಿಶಾಲ ಸಾಗರ ನಿಂತಿತ್ತು

ಅದುವೇ ನನ್ನ ಗಮ್ಯ ಸ್ಥಾನವಾಗಿತ್ತು
ಅಂತಿಮ ನೆಲೆಯಾಗಿತ್ತು
ಬಿಂದುವಿನ ರೂಪ, ಸಿಂಧು ರೂಪವಾಗಿತ್ತು
ನನ್ನ ಪ್ರಯಾಣ ಮುಕ್ತಾಯವಾಗಿತ್ತು
















Thursday, January 21, 2010

ನಾನು ಸಾಂಬಾರ್ ಮಾಡಿದ್ದು...

ಇಲ್ಲಿ (ಅಂದರೆ ದೆಲ್ಲಿಯಲ್ಲಿ) ನಾನು ಇರುವ ಪಕ್ಕದ flat ನಲ್ಲಿ ನನ್ನ ಥರಾನೇ 5 ಜನ ಕನ್ನಡಿಗರು ಇದ್ದಾರೆ.. ಅವರೂ ಬ್ಯಾಚುಲರ್ಸೇ.. ಹಾಗಾಗಿ ಟೈಮ್ ಪಾಸ್ ಗೆ ಅಂತ ಅಲ್ಲಿಗೆ ಹೋಗುತ್ತಾ ಇರುತ್ತೇನೆ. ಹೀಗೆ ಕಳೆದ ವಾರ ಹೋದಾಗ ಚಪಾತಿ ಮಾಡೋಣ ಅನ್ನುವ idea ಬಂತು. ಸರಿ ನಾನು ಮತ್ತು ವಾಮನ ಎಂಬ ಇಬ್ಬರು ಸೇರಿ ಹಿಟ್ಟು ಕಲಿಸಿದ್ದಾಯಿತು. ಈಗ ಚಪಾತಿ ಜೊತೆಗೆ ತಿನ್ನಲು ಏನಾದರು ಬೇಕಲ್ಲವೇ? ನಾನು ಆಲೂ ಮಟರ್ (ಆಲೂಗಡ್ಡೆ ಮತ್ತು ಹಸಿ ಬಟಾಣಿ ಸೇರಿಸಿ ಮಾಡುವ ಒಂದು ಬಗೆಯ ಸಾಂಬಾರ್) ಮಾಡುತ್ತೇನೆ, ಅದಕ್ಕೆ ನೀನು ಹೋಗಿ ಹಸಿ ಬಟಾಣಿ ತೆಗೆದುಕೊಂಡು ಬಾ ಎಂದು ಶೈಲೇಶ್ ಎಂಬವನನ್ನು ಕಳುಹಿಸಿದ್ದಾಯಿತು.

ಈ ಕಡೆ ಚಪಾತಿ ಲಟ್ಟಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಶೈಲೇಶನೋ ಬಟಾಣಿ ತರಲು ಹೋದವ ಪತ್ತೆ ಇಲ್ಲ.. ಫೊನ್ ಮಾಡಿ ಬೇಗ ಬಾ ಮಾರಾಯಾ ಎಂದು ಕರೆದೆ... ಉಳಿದ ಎಲ್ಲರೂ ಟಿವಿ ಯಲ್ಲಿ ಕ್ರಿಕೆಟ್ ನೋಡುವುದರಲ್ಲಿ ಮಘ್ನರಾಗಿದ್ದರು. ಬಟಾಣಿ ತರಲು ಹೋದ ಜನ ವಾಪಸು ಬಂದಮೇಲೆ ಚಪಾತಿ ಸುಡುವ ಜವಾಬ್ದಾರಿಯನ್ನು ಅವನಿಗೆ ವಹಿಸಿದ್ದಾಯಿತು.. ಚಪಾತಿಯೋ ರೋಟಿ, ನಾನ್ ಗಳ ರೂಪ ಪಡೆಯುತ್ತಿದ್ದವು. ಮಧ್ಯದಲ್ಲಿ ಕೆಲವು ಸರಿಯಾಗಿ ಬರುತಿದ್ದವು...

ನಾನು ಈ ಮಧ್ಯ ಸಾಂಬಾರ್ ಮಾಡುವ ತಯ್ಯಾರಿಯಲ್ಲಿ ತೊಡಗಿದೆ. ನಿಜ ಹೇಳ ಬೇಕೆಂದರೆ ನನಗೆ ಆಲೂಮಟರ್ ಮಾಡುವ ಸರಿಯಾದ ವಿಧಾನ ಗೊತ್ತಿರಲಿಲ್ಲ. ಗೊತ್ತಿದೆ ಎಂದು ಒಪ್ಪಿಕೊಂಡಾಗಿದೆ, ಹಿಂಜರಿಯುವಂತಿಲ್ಲ, ಮರ್ಯಾದೆ ಪ್ರಶ್ನೆ.. ಆಲೂಗಡ್ಡೆ ಕಟ್ ಮಾಡಿ, ಬಟಾಣಿ ಸುಲಿದು, ಇದ್ದ 2 ಟೊಮೆಟೋ ಹಣ್ಣನ್ನೂ ಕೊಚ್ಚಿ ಹಾಕಿ ಒಲೆಯ ಮೇಲೆ ಬೇಯಲು ಇಟ್ಟದ್ದಾಯಿತು. 10 ನಿಮಿಷ ಕಳೆಯಿತು, 15 ನಿಮಿಷ ಕಳೆಯಿತು.. ಆಲೂಗಡ್ಡೆ ಯಾಗಲೀ, ಬಟಾಣಿಯಾಗಲೀ ಬೇಯುವ ಯಾವ ಲಕ್ಷಣಗಳೂ ಕಾಣಲಿಲ್ಲ.. ಘಂಟೆ ಬೇರೆ 10 ಆಗುತ್ತಾ ಬಂದಿತ್ತು (ರಾತ್ರೆ) ಮತ್ತೇನು ಮಾಡುವುದು ಎಂದು ತಿಳಿಯದೇ ಸಂಪೂರ್ಣ ಮಿಶ್ರಣವನ್ನು ಕುಕ್ಕರ್ ಗೆ ವರ್ಗಾವಣೆ ಮಾಡಿ ಪುನಃ ಬೇಯಲು ಇಟ್ಟೆ..

ದೇವರ ದಯೆ ನನ್ನ ಮೇಲಿತ್ತು ಕಾಣುತ್ತದೆ. ಕುಕ್ಕರ್ 5-6 ಸೀಟಿ ಹೊಡೆದ ಮೇಲೆ ತೆರೆದು ನೋಡಿದಾಗ ತರಕಾರಿ ಬೆಂದಿತ್ತು. ಮತ್ತೆ ಇದನ್ನು ಬಾಣಲೆಗೆ ಹಾಕಿದಾಗ ನೀರು ಜಾಸ್ತಿಯಾದದ್ದು ಗೊತ್ತಾಯಿತು.. ಈಗ ಉಳಿದದ್ದು ಒಂದೇ ದಾರಿ.. ಇದನ್ನು ಸರಿಯಾಗಿ ಕುದಿಸಿಯೇ ನೀರನ್ನು ತೆಗೆಯಬೇಕಿತ್ತು. ಸ್ವಲ್ಪ MTR ಸಾಂಬಾರ್ powder ಮತ್ತು ಉಪ್ಪು ಹಾಕಿ ಕುದಿಯಲು ಬಿಟ್ಟೆ. 10 ನಿಮಿಷ ಬಿಟ್ಟು ನೋಡಿದಾಗ ನನ್ನ ಈ ಪ್ರಯೋಗ ಒಂದು ಹದಕ್ಕೆ ಬಂದಿತ್ತು. ಇಷ್ಟೆಲ್ಲಾ ಆಗುವಾಗ ಘಂಟೆ 10.30 ದಾಟಿದೆ... ಬೇಗನೆ ಊಟಕ್ಕೆ ಕೂತು ಆನ್ನ, ಚಪಾತಿ ಬಡಿಸಿಕೊಂಡು ನಾನು ಮಾಡಿದ ಈ ಹೊಸ ರುಚಿಯನ್ನೂ ಹಾಕಿಕೊಂಡು ಒಂದು ತುತ್ತು ಅನ್ನ ಬಾಯಿಗಿಟ್ಟೆ... .. ನಿಜವಾಗಿಯೂ ದೇವರ ದಯೆ; ಸಾಂಬಾರ್ ಮಾತ್ರ ಅದ್ಭುತ ರುಚಿಯಾಗಿತ್ತು. ಅದು ಹೇಗೆ ಆಯಿತು ಎಂಬುದು ಮಾತ್ರ ಚಿದಂಬರ ರಹಸ್ಯ. ಎಲ್ಲರ ಮುಖ ನೋಡಿದೆ ಚಪ್ಪರಿಸಿ ತಿನ್ನುತ್ತಿದ್ದಾರೆ. ಬದುಕಿದೆಯಾ ಬಡಜೀವವೆ ಅಂದುಕೊಂಡೆ. ಮತ್ತು ಆವತ್ತೇ deside ಮಾಡಿದೆ ಇನ್ನು ಮುಂದೆ ಇನ್ನೊಬ್ಬರ ಮನೆಗೆ ಹೋದಾಗ ಖಂಡಿತವಾಗಿಯೂ ಹೊಸ ರುಚಿಯ ಪ್ರಯೋಗಕ್ಕೆ ಮಾತ್ರ ಕೈ ಹಾಕುವುದಿಲ್ಲ...

Monday, January 18, 2010

25 ರೂಪಾಯಿಯ ಟೀ.....

ಈ ಘಟನೆ ನಡೆದದ್ದು ನಾನು ಮತ್ತು ನನ್ನ ಗೆಳೆಯರೆಲ್ಲಾ ಸೇರಿ ಜಮ್ಮುವಿಗೆ ಹೋಗುವಾಗ... ದೆಹಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಾ ನಿಂತಿದ್ದೆವು. ನಮ್ಮ ತಂಡದಲ್ಲಿ ಇಬ್ಬರು ವಿವಾಹಿತರೂ ಇದ್ದರು.. (ಅಂದರೆ ಸಂಸಾರ ಸಮೇತರಾಗಿ ನಮ್ಮ ಜೊತೆಗೆ ಬಂದವರು.) ಉಳಿದ ನಾವೆಲ್ಲರು ಬ್ಯಾಚುಲರ್ಸು.... ಒಟ್ಟು ಮಕ್ಕಳು ಸೇರಿ 13 ಜನರ ತಂಡ ನಮ್ಮದು..

ಹೀಗೆ ರೈಲಿಗೆ ಕಾದುನಿಂತಿದ್ದಾಗ ನಮ್ಮಲ್ಲೊಬ್ಬರಿಗೆ ಟೀ ಕುಡಿಯುವ ಮನಸ್ಸಾಯಿತು. ಅವರು ಅಲ್ಲೇ ಇದ್ದ ರೈಲ್ವೆ ಕ್ಯಾಂಟೀನ್ ಗೆ ಹೋಗಿ ಟೀ ತೆಗೆದುಕೊಂಡು ಬಂದರು. ಬಂದು ನಮ್ಮಲ್ಲಿ "ಟೀ ತುಂಬಾ ಚೆನ್ನಾಗಿದೆ ನೀವು ಕುಡಿಯಿರಿ" ಎಂದಾಗ; ರಾತ್ರೆ ಸಮಯ ವಾದ್ದರಿಂದ ಚಳಿಗೂ ಆಯ್ತು ಎಂದುಕೊಂಡು ನಾನು ಮತ್ತು ಗುರುಚರಣ್ ಇಬ್ಬರೂ ಟೀ ತರಲು ಕ್ಯಾಂಟೀನ್ ಕಡೆಗೆ ಹೊರಟಾಗ "ನನಗೂ ಒಂದು.. ನನಗೂ ಒಂದು.." ಎಂಬ 5 ಟೀ order ನೊಂದಿಗೆ ಹೋಗಿ 5 ಟೀ ಕೊಡು ಎಂದೆ (ಹಿಂದಿಯಲ್ಲಿಯೇ). ಕೊಟ್ಟನಂತರ "ಕಿತ್ನಾ" (ಎಷ್ಟು?) ಎಂದೆ.. ಅವನು "ಪಚ್ಚೀಸ್" (ಇಪ್ಪತ್ತೈದು) ಅಂದ... ನಾನೋ ಒಂದು ಟೀ ಗೆ ಇಪ್ಪತ್ತೈದು ಅಂದುಕೊಂಡು ಎನು ಮಾಡುವುದು ಎಂದು ತಿಳಿಯದೆ ತಲೆ ಬಿಸಿಯಾಗಲು ಪ್ರಾರಂಭವಾಯಿತು. ಟೀ ತೆಗೆದುಕೊಂಡಾಗಿದೆ. ಬೇಡ ಅನ್ನುವಂತಿಲ್ಲ. ಎನಾದರಾಗಲಿ ಮತ್ತೊಮ್ಮೆ confirm ಮಾಡಿಕೊಳ್ಳೋಣ ಎಂದುಕೊಂಡು "total ಕಿತ್ನಾ ಹುವಾ?" (ಒಟ್ಟು ಎಷ್ಟಾಯಿತು?") ಎಂದು ಕೇಳಿದೆ. ಅವನು ಮತ್ತೊಮ್ಮೆ "ಪಚ್ಚೀಸ್" ಎಂದ.. ಆಗ ನಾನು ಸ್ವಲ್ಪ ಉಸಿರು ಬಿಟ್ಟುಕೊಂಡು "ಭಾಯಿ ಸಾಬ್, ಮೈ ಎಕ್ ಚಾಯ್ ಕಾ ಪಚ್ಚಿಸ್ ಸಮ್ ಝಾ ಥಾ..." (ಸ್ವಾಮೀ ನಾನು ಒಂದು ಟೀ ಗೆ ಇಪ್ಪತ್ತೈದು ಅಂದುಕೊಂಡಿದ್ದೆ..) ಅಂದಾಗ ಅವನು "ಕೃಪಾ ಕರ್ ಕೆ ಆಪ್ ಕಾ ಪೈರ್ ದಿಖಾವೋ.." (ದಯವಿಟ್ಟ್ಟು ತಮ್ಮ ಪಾದ ತೋರಿಸಿ ಅನ್ನಬೇಕೆ...)

Saturday, January 16, 2010

ಸನ್ಮಾನ್ಯ ಸಭಾ ಅಧ್ಯಕ್ಷರೇ.......

ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ, ಮಾಳ

"ಸನ್ಮಾನ್ಯ ಸಭಾ ಅಧ್ಯಕ್ಷರೇ, ಪೂಜ್ಯನೀಯ ಗುರುಗಳೇ ಹಾಗೂ ನನ್ನ ನೆಚ್ಚಿನ ಸಹಪಾಠಿಗಳೇ... ನಾನು ಇಂದು ಪ್ರಜಾಪ್ರಭುತ್ವ ದಿನಾಚರಣೆಯ ಬಗ್ಗೆ ಒಂದೆರಡು ಮಾತುಗಳನ್ನು ಆಡಲು ಇಚ್ಛಿಸುತ್ತೇನೆ............"

ಇದು ನಾನು ಪ್ರೈಮರಿ ಶಾಲಾ ದಿನಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವ ಇತ್ಯಾದಿ ಸಮಾರಂಭಗಳಲ್ಲಿ ಮಕ್ಕಳು ಮಾಡುತ್ತಿದ್ದ ಭಾಷಣದ ತುಣುಕುಗಳು... ನನಗೆ ಇದು ಯಾಕೆ ನೆನಪಿಗೆ ಬಂತೆಂದರೆ ಇನ್ನು ಕೆಲವೇ ದಿನಗಳಲ್ಲಿ ಜನವರಿ ಇಪ್ಪತ್ತಾರು ಬರಲಿದೆಯಲ್ಲವೇ..

ನಾನು ಓದಿದ್ದು ಹಳ್ಳಿ ಶಾಲೆಯಲ್ಲಿ.. ಅಲ್ಲದೆ ಆಗಿನ ದಿನಗಳು ಈಗಿನ ಮೋಡರ್ನ್ ಶಾಲಾದಿನಗಳಂತಿರಲಿಲ್ಲ.. ಮಧ್ಯಮ ಮತ್ತು ಬಡ ಕುಟುಂಬ ಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಂದ ಕೂಡಿದ ಆ ದಿನಗಳು ನಿಜಕ್ಕೂ ಅವಿಸ್ಮರಣೀಯ...

ಯಾವುದೇ ರಾಷ್ಟ್ರೀಯ ಹಬ್ಬಗಳ ದಿನದ ಎರಡು ದಿನ ಮೊದಲೇ ನಮಗೆಲ್ಲಾ ಸಂಭ್ರಮ, ಸಡಗರ (ನಿಜವಾದ ಕಾರಣವೇನೆಂದರೆ, ಆವತ್ತು ರಜೆ, ಹಾಗೂ ಚಾಕೋಲೇಟ್ ಸಿಗುವುದರಿಂದ). ಸಮವಸ್ತ್ರವನ್ನು ನೀಟಾಗಿ ಒಗೆದು ಅದಕ್ಕೆ ಇಸ್ತ್ರಿ ಹಾಕಿ, ಅಲಮಾರಿಯ ಮೂಲೆಯಲ್ಲಿರುವ ಧ್ವಜವನ್ನು ತೆಗೆದು ಅದನ್ನು ಕಟ್ಟಲು ಪೈಪು ಅಥವಾ ಉದ್ದ ಕೋಲನ್ನೂ ತಯ್ಯಾರುಮಾಡುವ ಕಾರ್ಯಕ್ರಮ ವಿರುತ್ತಿತ್ತು.. (ನನ್ನಬಳಿ ಬಟ್ಟೆಯ ಧ್ವಜವಿದ್ದುದರಿಂದ ಅದನ್ನುಕಟ್ಟಲು ಕೋಲು ಬೇಕಾಗುತ್ತಿತ್ತು.)

ಬೆಳಗ್ಗೆ ಸ್ವಲ್ಪ ಬೇಗನೇ ಎದ್ದು ಅಮ್ಮನೊಂದಿಗೆ ಶಾಲೆಗೆ ಹೊರಡುತ್ತಿದ್ದೆ.. (ಹೌದು ನಾನು ಕಲಿತದ್ದು ನನ್ನ ತಾಯಿ ಟೀಚರ್ ಆಗಿದ್ದ ಶಾಲೆಯಲ್ಲಿಯೇ) ಹೋದಕೂಡಲೇ ಮುಖ್ಯೋಪಾಧ್ಯಾಯರು ಅಯಾ ತರಗತಿಗಳಿಗೆ ಅವರ ವಯಸ್ಸಿಗೆ ತಕ್ಕಂತೆ ಕೆಲಸಗಳನ್ನು ಹಂಚುತ್ತಿದ್ದರು. ಮುಖ್ಯವಾಗಿ ಕೆಲಸಗಳು ಸಿಗುತ್ತಿದ್ದುದು 5 ನೇ ಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ. ಅದರಲ್ಲಿ ಮುಖ್ಯವಾದುವೆಂದರೆ ಸಭಾಂಗಣದ ತಯ್ಯಾರಿ, ಬೆಂಚು ಡೆಸ್ಕುಗಳ ಜೋಡಣೆ, ಧ್ವಜಸ್ಥಂಬದ ತಯ್ಯಾರಿ ಇತ್ಯಾದಿ..


ಶಾಲಾ ಧ್ವಜ ಸ್ತಂ

ಎಲ್ಲಾತಯ್ಯಾರಿ ಆದನಂತರ ಧ್ವಜಾರೋಹಣ ಕಾರ್ಯಕ್ರಮ. ಊರಿನ ಗಣ್ಯ ವ್ಯಕ್ತಿ ಎಂದೆನಿಸಿಕೊಂಡವರಿಂದ ಇದನ್ನು ನಡೆಸಲಾಗುತ್ತಿತ್ತು. ಆಮೇಲೆ ಅವರು ನಮಗೆ ಶುಭಾಷಯಗಳನ್ನು ಹೇಳಿದನಂತರ ನಮ್ಮ ನಿಜವಾದ ಕಾರ್ಯಕ್ರಮ ಪ್ರಾರಂಭ ವಾಗುತ್ತಿತ್ತು ಅದುವೇ ಪ್ರಭಾತಫೇರಿ.. ಅಥವಾ march fast ಶಾಲೆಯಿಂದ ಹೊರಟ ಈ ನಮ್ಮ ಮೆರವಣಿಗೆ ಊರಿನ ಮುಖ್ಯ ಬೀದಿಯಿಂದ ಹಾದು ಸ್ವಲ್ಪ ದೂರದ ವರೆಗೂ ಹೋಗಿ ನಂತರ ಹಿಂತಿರುಗಿ ಬರುತ್ತಿದ್ದೆವು. ಹೀಗೆ ಹಾದುಹೋಗುವಾಗ ಅಂಗಡಿ ಮುಂಗಟ್ಟುಗಳನ್ನು ಹಾದು ಹೋಗಬೇಕಾದ್ದರಿಂದ ಎಲ್ಲಾ ಅಂಗಡಿಯವರು ನಮಗೆ ಚೊಕೊಲೇಟ್ ಗಳನ್ನು ಹಂಚುತ್ತಿದ್ದರು. ಹೀಗಾಗಿ ನಮಗೆ ಎನಿಲ್ಲವೆಂದರು 10 ಚೊಕೊಲೇಟ್ ಆವತ್ತು ಸಿಗುತ್ತಿದ್ದುದು ಗ್ಯಾರೆಂಟಿಯಾಗಿತ್ತು. ಹೀಗೆ ಮೆರವಣಿಗೆ ಹೋಗುವಾಗ "ಮಹಾತ್ಮಾ ಗಾಂಧೀಜೀ ಕೀ ಜೈ", "ಸುಭಾಶ್ ಚಂದ್ರ ಬೋಸ್ ಕೀ ಜೈ" ಎಂದು ಜೈಕಾರ ಹಾಕುವುದೂ ಒಂದು ಸಂಭ್ರಮ.

ಶಾಲೆಗೆ ಹಿಂತಿರುಗಿದ ನಂತರ ಸಭಾಕಾರ್ಯಕ್ರಮ ಪ್ರಾರಂಭವಾಗುತ್ತಿತ್ತು... ಆರಂಭದಲ್ಲಿ ಅಧ್ಯಾಪಕರು, ಮುಖ್ಯ ಅಥಿತಿಗಳ ಭಾಷಣಗಳು ಮುಗಿದ ನಂತರ ನಮ್ಮ ಅಂದರೆ "ವಿದ್ಯಾರ್ಥಿಗಳಿಂದ ಎರಡು ಮಾತುಗಳು" ಪ್ರಾರಂಭ. ನಡಗುವ ಕೈಕಾಲು, ಒಣಗಿದ ನಾಲಗೆ ಯಿಂದ ಹಾಗೋ ಹೀಗೋ ಸ್ಟೇಜ್ ಹತ್ತುತ್ತಿದ್ದೆ.. ಅಲ್ಲಿಯೋ ಎಲ್ಲರೂ ನನ್ನನ್ನೇ ಕೆಕ್ಕರಿಸಿ ನೋಡುವಂತೆ ಭಾಸವಾಗಬೇಕೆ... ಅಂತು ಅಲ್ಪ ಸ್ವಲ್ಪ ಧೈರ್ಯವನ್ನು ಒಗ್ಗೂಡಿಸಿ " ಸನ್ಮಾನ್ಯ ಸಭಾ ಅಧ್ಯಕ್ಷರೇ.... " ಪ್ರಾರಂಭಿಸುತ್ತಿದ್ದೆ.. ಒಂದೆರಡು ಪ್ಯಾರಾ ಮುಗಿಸಿ ಮುಖ್ಯ ವಿಷಯಕ್ಕೆ ಬರುತ್ತಿದ್ದಂತೆಯೇ ಹಾಳಾದ ಮರೆವು ಅದೇನು ತಯ್ಯಾರಿ ಮಾಡಿಕೊಂದು ಬಂದ್ದಿದ್ದೇವೆಂದು ಮರೆತು ಹೋಗಬೇಕೆ.. ಸ್ವಲ್ಪ ಹೊತ್ತು ತಡಕಾಡಿ ಜಪ್ಪಯ್ಯ್ಯಾ ಅಂದರೂ ನೆನಪಿಗೆ ಬರುವುದಿಲ್ಲ ಅಂದಮೇಲೆ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದ್ದೆ.. ಅದೇ ಜೇಬಿನಲ್ಲಿರುವ ಭಾಷಣದ ಚೀಟಿ. ಅದನ್ನು ಮೆಲ್ಲಗೆ ಹೊರ ತೆಗೆದು ಯಾರಿಗೂ ಕಾಣಿಸದಂತೆ ಬಿಡಿಸಿ (??!!) ಮುಂದಿನ ಸಾಲುಗಳನ್ನು ಖಚಿತ ಪಡಿಸಿಕೊಂಡ ನಂತರ ಭಾಷಣವನ್ನು ಮುಂದುವರೆಸುತ್ತಿದ್ದೆ. ಬಹಳ ಕಷ್ಟಪಟ್ಟು ತಯ್ಯಾರಿಸಿದ ಈ ಭಾಷಣದಲ್ಲಿ ಕೊನೆಗೂ ಒಂದೆರಡು ಪ್ಯಾರಾಗಳು ಉಳಿದೇ ಹೋಗುತ್ತಿತ್ತು. ಕೊನೆಗೆ ಎಲ್ಲಾ ಮುಗಿದ ನಂತರ ಜೋರಾಗಿ "ಜೈ ಹಿಂದ್" ಎಂದರೆ ಈ ಭಾಷಣಕ್ಕೆ ಮುಕ್ತಾಯ... ಸ್ಟೇಜ್ ನಿಂದ ಕೆಳಗಿಳಿದ ಮೇಲೆ ಸ್ನೇಹಿತರು "ತುಂಬಾ ಚೆನ್ನಾಗಿತ್ತೋ ಮಾರಾಯಾ, ಬಹಳ ಚೆನ್ನಾಗಿ ಮಾತಾಡಿದಿ..." ಎಂದರೆ ಯುದ್ಧ ಗೆದ್ದು ಬಂದ ಸಂಭ್ರಮ.

ಶಾಲೆಯ ಸುತ್ತಲಿನ ಪರಿಸರ

ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಅವರ ಅಣ್ಣನೋ, ಅಕ್ಕನೋ ಭಾಷಣವನ್ನು ಬರೆದುಕೊಟ್ಟಿರುತ್ತಾರೆ ಅಲ್ಲದೇ ಅವರೂ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವುದರಿಂದ ಎಲ್ಲರ ಮಾತುಗಳು ಒಂದೇ ರೀತಿಯಾಗಿರುತ್ತವೆ. ಆದರೂ ದೇವರ ದಯೆಯಿಂದ ಎಲ್ಲರ ಭಾಷಣಗಳನ್ನು ತಾಳ್ಮೆಯಿಂದ ಕೇಳುತ್ತಿದ್ದೆವು (ಇಲ್ಲದಿದ್ದರೆ ಅಧ್ಯಾಪಕರ ಏಟು ತಿನ್ನಬೇಕು) ಎಲ್ಲ ಮಕ್ಕಳ ಭಾಷಣಗಳೂ ಮುಗಿದನಂತರ ಸಭಾಧ್ಯಕ್ಷರ ಮಾತುಗಳು..

ತದನಂತರ ರಾಷ್ಟ್ರ ಗೀತೆ ಹಾಡಿ ಮನೆಗೆ ಹೊರಟೆವೆಂದರೆ ಆ ವರ್ಷದ ರಾಷ್ಟ್ರೀಯ ದಿನಾಚರಣೆ ಮುಗಿದಂತೆ...

"ಇಷ್ಟು ಹೇಳಿ ನನ್ನ ಓಂದೆರಡು ಮಾತುಗಳನ್ನು ಮುಗಿಸುತ್ತಿದ್ದೇನೆ......."